ಬೆಳಗಾವಿ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಲು ಸರ್ಕಾರಕ್ಕೆಡಿ.19ರವರೆಗೆ ಮಾತ್ರ ಗಡುವು. ಇದು ಆಗದಿದ್ದರೆ ಡಿ.22ರಂದು ಸುವರ್ಣ ವಿಧಾನಸೌಧಕ್ಕೆ ಅಧಿವೇಶನ ವೇಳೆಯೇ ಮುತ್ತಿಗೆ ಹಾಕಲಾಗುವುದು’ ಎಂದು ಹೋರಾಟ ಸಮಿತಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ನಡೆದ ಪಂಚಮಸಾಲಿ ಸಮಾಜಕ್ಕೆ ಸೇರಿದ ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
‘ಮಿಸಲಾತಿ ಪ್ರಕಟಿಸದೇ ಇದ್ದರೆ 25 ಲಕ್ಷಕ್ಕೂ ಹೆಚ್ಚು ಜನ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಪಂಚಮಸಾಲಿಗರ ವಿರಾಟ್ ಸ್ವರೂಪ ಹೇಗಿರುತ್ತದೆ ಎಂದು ಸರ್ಕಾರಕ್ಕೆ ತೋರಿಸುತ್ತೇವೆ’ ಎಂದರು.
‘ಅಧಿವೇಶನ ಮುಗಿದ ಬಳಿಕ ನಾವು ಮೀಸಲಾತಿ ಪಡೆದೇ ಮರಳುತ್ತೇವೆ. ನಂತರ ಕೂಡಲ ಸಂಗಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗಾಗಿ ಬೃಹತ್ ಪಂಚಮಸಾಲಿ ಪೀಠ ಕಟ್ಟಲಾಗುವುದು. ಇದಕ್ಕೆ ನಾನೇ ₹ 1 ಕೋಟಿ ನೆರವು ನೀಡುತ್ತೇನೆ. ಸಿ.ಸಿ. ಪಾಟೀಲ ಅವರೂ ನೀಡಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಮಾದರಿಯಲ್ಲೇ ನಿರ್ಮಿಸಲಾಗುವುದು’ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಡಿ.19 ನಾವು ನೀಡಿದ ಗಡುವು ಅಲ್ಲ. ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡರೆ ಸನ್ಮಾನ, ಇಲ್ಲದಿದ್ದರೆ ಪ್ರತಿಭಟನೆ’ ಎಂದರು.