ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗ ಈಚೆಗೆ ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದ್ದ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಅವರ ಅಂಗಡಿಗೆ ಕಿಡಿಗೇಡಿಗಳು ಶುಕ್ರವಾರ ಬೆಳಗಿನ ಜಾವ 2ರ ಸುಮಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿದ್ದಾರೆ.
ಶಹಾಪುರದಲ್ಲಿ ಅವರ ಮನೆ ಸಮೀಪದಲ್ಲೇ ಕನ್ನಡ ಬಾವುಟಗಳು, ಶಲ್ಯಗಳನ್ನು ಮಾರುವ ಅಂಗಡಿ ಇದೆ. ಅದರ ಬಾಗಿಲಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ತಕ್ಷಣ ಗಮನಿಸಿದ ತಾಳೂಕರ ಕುಟುಂಬದವರು ಅನಾಹುತ ತಪ್ಪಿಸಿದರು.
ಶಹಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ, ‘ನಾನು ಎಂದಿಗೂ ಭಾಷಾ ದ್ವೇಷ ಮಾಡಿಲ್ಲ. ಇಂತಹ ಬೆದರಿಕೆಗೆ ಹಾಗೂ ಬೆಂಕಿ ಹಚ್ಚಿದ್ದಕ್ಕೆ ಹೆದರುವುದಿಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ನಾನು ಹೋರಾಟ ಮಾಡುತ್ತಿಲ್ಲ’ ಎಂದು ಹೇಳಿದರು.