ಬೆಳಗಾವಿ: ಇಲ್ಲಿನ ಕೋಟೆ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಎದುರಿಗೆ ಸೋಮವಾರ ಬೈಕಿಗೆ ಉಸುಕು ತುಂಬಿದ ಲಾರಿ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭರತೇಶ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಸಾಬಿಯಾ ಶಬ್ಬೀರ್ ಪಾಳೇಗಾರ (16) ಮೃತಪಟ್ಟವರು. ಬೈಕ್ ಓಡಿಸುತ್ತಿದ್ದ ಪಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಎಂದಿನಂತೆ, ಸೋಮವಾರ ಬೆಳಿಗ್ಗೆ ಕುಡ ಸಾಬಿಯಾ ಅವರನ್ನು ಕಾಲೇಜಿಗೆ ಬಿಡಲು ಅವರ ಪಾಲಕರು ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದರು. ಕೋಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಉಸುಕಿನ ಲಾರಿ ಬೈಕಿಗೆ ಡಿಕ್ಕಿ ಹೊಡೆಯಿತು.
ಡಿಕ್ಕಿ ರಭಸಕ್ಕೆ ಬೈಕ್ ಮಗುಚಿ, ಸಾಬಿಯಾ ಲಾರಿಯ ಚಕ್ರಕ್ಕೆ ಸಿಲುಕಿದರು. ಅವರ ತಲೆಯ ಮೇಲೆಯೇ ಲಾರಿ ಹರಿಯಿತು. ಇದರಿಂದ ಮಿದುಳಿನ ಭಾಗ ರಸ್ತೆಯಲ್ಲಿ ಚೆಲ್ಲಾಡಿತು. ಈ ದೃಶ್ಯ ಕಂಡು ಜನ ಬೆಚ್ಚಿಬಿದ್ದರು.
ಬೈಕ್ ಓಡಿಸುತ್ತಿದ್ದವರು ರಸ್ತೆ ಬದಿಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾದರು.
ಅಪಘಾತ ದೃಶ್ಯ ಕಂಡ ತಕ್ಷಣ ಅಪಾರ ಜನ ಸ್ಥಳಕ್ಕೆ ಧಾವಿಸಿದರು. ಕ್ಷಣಮಾತ್ರದಲ್ಲೇ ವಿದ್ಯಾರ್ಥಿನಿ ಜೀವ ಬಿಟ್ಟಿದ್ದರಿಂದ ಯಾರಿಗೂ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಬಂದ ಬೆಳಗಾವಿ ಉತ್ತರ ಸಂಚಾರ ಠಾಣೆ ಪೊಲೀಸರು, ಶವದ ಮೇಲೆ ಬಟ್ಟೆ ಹೊದಿಸಿ ಜನರಿಗೆ ಕಾಣದಂತೆ ಮಾಡಿದರು. ಇದೇ ಮಾರ್ಗದಲ್ಲಿ ಮತ್ತಷ್ಟು ಶಾಲೆ, ಕಾಲೇಜು ವಿದ್ಯಾರ್ಥಿಗಳ ಓಡಾಟ ಇರುವ ಕಾರಣ ಸಂಚಾರಕ್ಕೆ ಅನುವು ಮಾಡಿದರು.
ಬಳಿಕ ಆಂಬುಲೆನ್ಸ್ ಮೂಲಕ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.
ಲಾರಿ ಚಾಲಕ ಮಹಿಬೂಬ್, ಅಪಘಾತ ನಡೆದ ತಕ್ಷಣ ಸ್ಥಳದಿಂದ ಓಡಿಹೋಗಿ ಮಾರ್ಕೆಟ್ ಪೊಲೀಸ್ ಠಾಣೆಗೆ ಹಾಜರಾದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದೊಳಗೆ ಉಸುಕಿನ ಲಾರಿಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಆದರೆ ಯಾರದೋ ಮನೆ ನಿರ್ಮಾಣಕ್ಕೆ ಈ ಲಾರಿ ಚಾಲಕ ಉಸುಕು ಸಾಗಿಸುತ್ತಿದ್ದ. ಈ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.