ಬೆಳಗಾವಿ: ಇಲ್ಲಿನ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಹ್ಯಾದ್ರಿ ನಗರದ ಮಹಾಬಲೇಶ್ವರ ದೇವಸ್ಥಾನ ಉದ್ಯಾನದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಫೋಟೊ ಮಾತ್ರವೇ ಇದ್ದ ಫಲಕವನ್ನು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ತೆರವುಗೊಳಿಸಿದರು.
ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ ಜಾಧವ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಕಾರ್ಯಾಚರಣೆ ನಡೆಸಿದರು. ಕಾಮಗಾರಿಯ ವಿವರ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಫೋಟೊಗಳ ಜೊತೆಗೆ ಲಕ್ಷ್ಮಿ ಹೆಬ್ಬಾಳಕರ ಫೋಟೊವುಳ್ಳ ಫಲಕವನ್ನು ಅಳವಡಿಸಿದರು.
ಬಳಿಕ ಮಾತನಾಡಿದ ಧನಂಜಯ, ‘ಶಾಸಕರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ನಾನೇ ಮಂಜೂರು ಮಾಡಿಸಿದ್ದೆಂದು ಹೇಳಿಕೊಳ್ಳುತ್ತಿದ್ದಾರೆ. ಅದನ್ನು ಬಿಂಬಿಸುವ ಫಲಕಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಈ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಮುಂದಿನ ದಿನಗಳಲ್ಲಿ ತಪ್ಪು ಮಾಹಿತಿ ನೀಡುವ ಫಲಕಗಳನ್ನು ತೆಗೆದು ಹಾಕಿ ಶಿಷ್ಟಾಚಾರದ ಪ್ರಕಾರ ಫಲಕ ಅಳವಡಿಸಬೇಕು. ಇಲ್ಲವಾದಲ್ಲಿ ಶಿಷ್ಟಾಚಾರ ಪಾಲಿಸದ ಎಲ್ಲ ಫಲಕಗಳನ್ನು ತೆಗೆಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನೂ ಸೇರಿಸಿ ಶಾಸಕರು ಕ್ಷೇತ್ರಕ್ಕೆ ₹ 1,200 ಕೋಟಿ ಅನುದಾನ ತಂದಿದ್ದೇನೆ ಎಂದು ಲೆಕ್ಕ ಕೊಡುತ್ತಿದ್ದಾರೆ’ ಎಂದು ಟೀಕಿಸಿದರು. ‘ಈ ಸಂಗತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಶಿಷ್ಟಾಚಾರದ ಪ್ರಕಾರ ಹೊಸದಾಗಿ ಫಲಕ ಹಾಕುವುದಾಗಿ ತಿಳಿಸಿದ್ದಾರೆ. ಶಾಸಕರು ಬರಬೇಕು;ಕಾಮಗಾರಿಗೆ ಚಾಲನೆ ನೀಡಿ ಹೋಗಬೇಕಷ್ಟೆ’ ಎಂದರು.
ಗ್ರಾಮೀಣ ಮಂಡಳದ ಪ್ರಧಾನ ಕಾರ್ಯದರ್ಶಿ ಪಂಕಜಾ ಘಾಡಿ, ನಗರಪಾಲಿಕೆ ಸದಸ್ಯೆ ವೀಣಾ ವಿಜಾಪುರೆ, ಪ್ರದೀಪ ಪಾಟೀಲ, ಷಡಕ್ಷರಿ ಹಿರೇಮಠ, ಸುರೇಶ ಘೋರ್ಪಡೆ, ಗುರುರಾಜ ಹಲಗತ್ತಿ, ಅನಿಲ ಪಾಟೀಲ, ಮಿಥಿಲ ಜಾಧವ, ಶಾಲು ಫರ್ನಾಂಡೀಸ್, ನಾರಾಯಣ ಪಾಟೀಲ, ಜೋತಿಬಾ ಥೋರವತ್ ಇದ್ದರು.