ಬೆಳಗಾವಿ: ‘ಮಹಿಳೆಯರ ಶಕ್ತಿ ಅಪಾರವಾಗಿದ್ದು, ಅದು ಸಂಘಟನೆ ರೂಪದಲ್ಲಿ ಸೇರಿದರೆ ನೂರ್ಮಡಿಗೊಳ್ಳುತ್ತದೆ. ಅದನ್ನು ಧನಾತ್ಮಕವಾಗಿ ಬಳಸಿಕೊಂಡರೆ ದೇಶದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಾಗುತ್ತದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಹೊರವಲಯದ ಗಣೇಶಪುರದ ಮಹಾಲಕ್ಷ್ಮಿ ನಗರದಲ್ಲಿ ‘ಶ್ರೀಮಹಾಲಕ್ಷ್ಮಿ ಮಹಿಳಾ ಮಂಡಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ದೇಶ ಆಳಿರುವುದನ್ನು ಮತ್ತು ದೊಡ್ಡ ಕ್ರಾಂತಿ ಮಾಡಿರುವುದನ್ನು ನಾವ್ಯಾರೂ ಮರೆಯುವಂತಿಲ್ಲ. ನಾವು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಸಂಘಟನೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ’ ಎಂದರು.
ಮಹಿಳಾ ಮಂಡಳದ ಅಧ್ಯಕ್ಷೆ ಅನಿತಾ ಬಿರಾದಾರ, ಪದಾಧಿಕಾರಿಗಳಾದ ಶೀಲಾ ಪಾಟೀಲ, ಶ್ರೀಮತಿ ಹುಕ್ಕೇರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.