ಅಥಣಿ(ಬೆಳಗಾವಿ ಜಿಲ್ಲೆ): ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಂದೆ ಲಕ್ಷ್ಮಣ ಸವದಿ ಅವರು ಅಥಣಿಯಿಂದಲೇ ಸ್ಪರ್ಧಿಸುವುದು ಖಚಿತ’ ಎಂದು ಪುತ್ರ ಚಿದಾನಂದ ಸವದಿ ಹೇಳಿದರು.
‘ಅಥಣಿಯಲ್ಲಿ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ, ನಾನೂ ಗೋಕಾಕದಿಂದ ಸ್ಪರ್ಧಿಸಲಾರೆ’ ಎಂಬ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ, ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಕಳೆದ 20 ವರ್ಷದಿಂದ ನಮ್ಮ ತಂದೆ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಅಥಣಿ ಕ್ಷೇತ್ರ ಬಿಟ್ಟುಕೊಡುವ ಮಾತೇ ಇಲ್ಲ. ಚುನಾವಣೆಗೆ ನಿಲ್ಲುವುದು ನಿಶ್ಚಿತ. ನಮ್ಮ ತಂದೆ ಹೊರತಾಗಿ ಯಾರಿಗೂ ಟಿಕೆಟ್ ಕೊಡುವಂತಿಲ್ಲ. ಈ ಸಂಬಂಧ ರಾಜ್ಯ ನಾಯಕರಿಗೂ ಸಂದೇಶ ಕೋಡಲು ಸಿದ್ಧರಿದ್ದೇವೆ’ ಎಂದರು.
‘ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಸ್ನೇಹಿತನ ಮೇಲೆ ಅಷ್ಟು ಪ್ರೀತಿ ಇದ್ದರೆ, ತಾವು ಪ್ರತಿನಿಧಿಸುತ್ತಿರುವ ಗೋಕಾಕ ಕ್ಷೇತ್ರವನ್ನೇ ಬಿಟ್ಟುಕೊಡಲಿ. ನಾವು ಅಥಣಿ ಕ್ಷೇತ್ರ ಬಿಟ್ಟು ಕೊಡಲಾರೆವು’ ಎಂದು ಪುನರುಚ್ಚರಿಸಿದರು.