ಬೆಳಗಾವಿ: ಇಲ್ಲಿನ ತಿಲಕವಾಡಿಯ 2ನೇ ರೈಲ್ವೆ ಗೇಟ್ ಸಮೀಪದಲ್ಲಿ ಶುಕ್ರವಾರ ಹಾವಾಡಿಗರಿಂದ ನಾಗರಹಾವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಅದನ್ನು ತಾಲ್ಲೂಕಿನ ಮಚ್ಚೆಯ ಟ್ರೀ ಪಾರ್ಕ್ ಎದುರಿನ ಅರಣ್ಯ ಪ್ರದೇಶದಲ್ಲಿ ಬಿಟ್ಟರು.
‘ಇಬ್ಬರು ಮಹಿಳೆಯರು ಹಾವನ್ನು ಹಿಡಿದು ತಂದು ಬುಟ್ಟಿಯಲ್ಲಿಟ್ಟುಕೊಂಡಿದ್ದರು. ಅದನ್ನು ಬಳಸಿಕೊಂಡು ಹಣ ಸಂಪಾದಿಸುವುದು ಅವರ ಉದ್ದೇಶವಾಗಿತ್ತು. ಅವರಿಗೆ ತಿಳಿವಳಿಕೆ ನೀಡಿ, ಹಾವನ್ನು ರಕ್ಷಿಸಿದ್ದೇವೆ. ಇಂಥವರು ಕಂಡುಬಂದರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳು ತಿಳಿಸಿದರು.