ಅಥಣಿ: ‘ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರೋಧಪಕ್ಷದ ಮುಖಂಡ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಲಿಗೆ ಬಿದ್ದಿದ್ದಾನೆ. ಪಕ್ಷದವರು ಎಂತಹ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ?’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡ ಎಸ್.ಕೆ. ಬುಟಾಳಿ ಕೇಳಿದರು.
ಭಾನುವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷಕ್ಕೆ ನಾವು ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಗೆಲ್ಲುವ ಸಾಮರ್ಥ್ಯವಿದ್ದರೂ ಟಿಕೆಟ್ ನಿರಾಕರಿಸಿದ್ದಾರೆ. ಕಾರಣ ಗೊತ್ತಿಲ್ಲ. ನಾನು ಹಾಗೂ ಸೋದರ ಬಸವರಾಜ ಬುಟಾಳಿ ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದೇವೆ. ನ. 20ರಂದು ಬೆಂಬಲಿಗರ ಸಭೆ ಕರೆದು ಅವರ ಅನುಮತಿ ಮೇರೆಗೆ ಒಬ್ಬರು ನಾಮಪತ್ರ ಹಿಂಪಡೆದು, ಇನ್ನೊಬ್ಬರು ಕಣದಲ್ಲಿ ಉಳಿಯಲಿದ್ದೇವೆ’ ಎಂದು ತಿಳಿಸಿದರು.
ಟಿಕೆಟ್ ಆಕಾಂಕ್ಷಿಯಾಗಿದ್ದ ಬಸವರಾಜ ಬುಟಾಳಿ ಮಾತನಾಡಿ, ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇಲ್ಲದವನಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಕೊಟ್ಟಿರುವುದು ಅಚ್ಚರಿ ತರಿಸುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಯಾವ ಪಕ್ಷಗಳಿಗೂ ಭವಿಷ್ಯವಿಲ್ಲ. ಹೀಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇವೆ’ ಎಂದು ಹೇಳಿದರು.
ಮುಖಂಡರಾದ ಸುಭಾಷ ಪಾಟನಕರ್, ವಿಲಿನರಾಜ ಯಳಮಲ್ಲೆ, ಪ್ರಶಾಂತ ತೋಟಕರ್, ರವಿ ಬಡಕಂಬಿ, ಸಂತೋಷ ಬಡಕಂಬಿ , ಮಲ್ಲಿಕಾರ್ಜುನ ಬುಟಾಳಿ, ರೇಖಾ ಪಾಟೀಲ, ಮಹಾದೇವಿ ಹೋಳಿಕಟ್ಟಿ ಇದ್ದರು.