ಮುಗಳಖೋಡ: ‘ಸಂವಿಧಾನ ರಕ್ಷಣೆಗಾಗಿ ದಸಂಸ (ಭೀಮವಾದ) ಜಿಲ್ಲಾ ಘಟಕದಿಂದ ಸಂವಿಧಾನ ಜಾಗೃತಿ ಸಮಾವೇಶವನ್ನು ರಾಯಬಾಗ ತಾಲ್ಲೂಕು ಹಿಡಕಲ್ ಗ್ರಾಮದಲ್ಲಿ ಫೆ. 26ರಂದು ಮಧ್ಯಾಕ್ಕೆ 2ಕ್ಕೆ ಏರ್ಪಡಿಸಲಾಗಿದೆ’ ಎಂದು ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ಸಂತೋಷ ಕಾಂಬಳೆ ತಿಳಿಸಿದರು.
ಇಲ್ಲಿ ಬುಧವಾರ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಡಾ.ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ಸರ್ವಕಾಲಕ್ಕೂ ಶ್ರೇಷ್ಠ ಹಾಗೂ ಸರ್ವ ಜನಾಂಗದ ಅಭ್ಯುದಯಕ್ಕೆ ರಚಿತವಾಗಿರುವ ಗ್ರಂಥವಾಗಿದೆ. ಅದನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಮುಖ್ಯಅತಿಥಿಯಾಗಿ ಭಾಗವಹಿಸುವರು. ದಸಂಸ (ಭೀಮವಾದ) ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಮಹಾವೀರ ಮೋಹಿತೆ, ಸುರೇಶ ತಳವಾರ, ಸಿದ್ದಾರ್ಥ ಸಿಂಗೆ, ಚಿದಾನಂದ ತಳಕೇರಿ, ಸಂಜೀವ ಕಾಂಬಳೆ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಮುಗಳಖೋಡದಿಂದ ಹಿಡಕಲ್ವರೆಗೆ ದ್ವಿಚಕ್ರವಾಹನಗಳ ರ್ಯಾಲಿ ನಡೆಲಾಗುವುದು’ ಎಂದು ತಿಳಿಸಿದರು.