ಬೆಳಗಾವಿ:ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸ್ಮಾರ್ಟ್ ಸಿಟಿ ಕಂಪನಿಯಿಂದ ‘ಫ್ರೀಡಂ ಟು ಸೈಕಲ್’ ಸೈಕಲ್ ರ್ಯಾಲಿಯನ್ನು ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿತ್ತು.
ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಸ್ಮಾರ್ಟ್ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಬಾಗೇವಾಡಿ ಬಲೂನುಗಳನ್ನು ಹಾರಿಬಿಡುವ ಮೂಲಕ ರ್ಯಾಲಿ ಉದ್ಘಾಟಿಸಿದರು. ರ್ಯಾಲಿಯಲ್ಲಿ ತಾವೂ ಪಾಲ್ಗೊಂಡರು.
‘ನಿಯಮಿತವಾಗಿ ಸೈಕಲ್ ಬಳಸುವುದರಿಂದ ದೇಹ ಸದೃಢವಾಗುತ್ತದೆ. ಇಡೀ ದಿನ ಚಟುವಟಿಕೆಯಿಂದ ಇರಬಹುದು. ಸೈಕಲ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತ್ಯೇಕ ಪಥವನ್ನು ಕೆಲವು ರಸ್ತೆಗಳಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರವೀಣ ಬಾಗೇವಾಡಿ ಸಲಹೆ ನೀಡಿದರು.
‘ಪರಿಸರ ಮಾಲಿನ್ಯ ಪ್ರಮಾಣ ಕಡಿಮೆ ಮಾಡುವುದಕ್ಕೆ ಸೈಕಲ್ ಬಳಕೆ ಸಹಕಾರಿಯಾಗಿದೆ. ಅಲ್ಲದೇ, ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಶೋಕ ವೃತ್ತದಿಂದ ಪ್ರಾರಂಭವಾದ ರ್ಯಾಲಿಯು ಸಂಗೊಳ್ಳಿರಾಯಣ್ಣ ವೃತ್ತದ ಮೂಲಕ ರಾಣಿ ಚನ್ನಮ್ಮ ವೃತ್ತದಲ್ಲಿ ಮುಕ್ತಾಯವಾಯಿತು. ಸೈಕಲ್ ಕ್ಲಬ್ಗಳ ಸದಸ್ಯರು, ವಿದ್ಯಾರ್ಥಿಗಳು ಸೇರಿದಂತೆ 75 ಮಂದಿ ಭಾಗಿಯಾಗಿದ್ದರು. ಚನ್ನಮ್ಮ ವೃತ್ತದಲ್ಲಿ ಸೈಕಲ್ ಕ್ಲಬ್ನ ಮುಖ್ಯಸ್ಥರಿಗೆ ಸ್ಮಾರ್ಟ್ ಸಿಟಿ ಕಂಪನಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.