ಬೆಳಗಾವಿ: ‘ಬೆಂಗಳೂರು ನಂತರ ಅತ್ಯಂತ ಪ್ರಾಮುಖ್ಯತೆ ಗಳಿಸಿರುವ ಗಡಿ ನಾಡು ಬೆಳಗಾವಿ. ಇದು 2ನೇ ರಾಜಧಾನಿ ಆಗಬೇಕು ಎಂಬ ಉದ್ದೇಶದಿಂದಲೇ ಸುವರ್ಣ ವಿಧಾನಸೌಧವನ್ನು ನಮ್ಮ ಸರ್ಕಾರವಿದ್ದಾಗಲೇ ಕಟ್ಟಲಾಗಿದೆ. ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮತ ಬ್ಯಾಂಕ್ ರಾಜಕಾರಣ ಮಾಡಿದ ಕಾಂಗ್ರೆಸ್, ಅವಸಾನದ ಅಂಚಿನಲ್ಲಿದೆ. ಸರ್ಕಾರವಿದ್ದಾಗ ಇಲ್ಲಿಗೆ ಏನನ್ನೂ ಕೊಡುಗೆ ನೀಡಲಿಲ್ಲವಾದ್ದರಿಂದ ಸಿದ್ದರಾಮಯ್ಯ ಸುಮ್ಮನೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಬೆಳಗಾವಿಗೆ ಏನಾದರೂ ಕೊಡುಗೆ ಕೊಟ್ಟಿದ್ದರೆ ಅವರು ತಿಳಿಸಲಿ’ ಎಂದು ಸವಾಲು ಹಾಕಿದರು.
‘ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಸ್ವಲ್ಪ ಸಮಯ ಕೊಡಿ. ಆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
ಉಪ ಚುನಾವಣೆ: 23 ಮಂದಿಯಿಂದ ನಾಮಪತ್ರ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಟ್ಟು 23 ಮಂದಿ 33 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕೊನೆಯ ದಿನವಾದ ಮಂಗಳವಾರ ಬಿಜೆಪಿಯ ಮಂಗಲಾ ಅಂಗಡಿ ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದರು. ಪಕ್ಷೇತರರಾಗಿ ಬಸವರಾಜ ಹುದ್ದಾರ, ಶ್ರೀಕಾಂತ ಪಡಸಲಗಿ (ಮತ್ತೊಂದು ಸೆಟ್), ಭಾರತಿ ಚಿಕ್ಕನರಗುಂದ, ಸಂಗಮೇಶ ಚಿಕ್ಕನರಗುಂದ, ಗೌತಮ ಯಮನಪ್ಪ ಕಾಂಬ್ಳೆ, ಕೃಷ್ಣಜಿ ಪಾಟೀಲ, ಅಪ್ಪಾಸಾಹೇಬ ಕುರಣೆ, ಸುರೇಶ ಬಸಪ್ಪ ಮರಲಿಂಗನವರ, ಸುರೇಶ ಬಸವಂತಪ್ಪ ಪರಗನವರ, ಶುಭಂ ಶೆಳಕೆ (ಮತ್ತೊಂದು ಸೆಟ್), ಕಲ್ಲಪ್ಪ ದಶರಥ ಕರಲೇಕರ, ಘೋಳಪ್ಪ ಬಸಲಿಂಗಪ್ಪ ಮೇಟಿ, ಗಂಗಪ್ಪ ನಾಗನೂರ ಮತ್ತು ದಯಾನಂದ ಗುರುಪತ್ರಯ್ಯ ಚಿಕ್ಕಮಠ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್ಕುಮಾರ್ ಸ್ವೀಕರಿಸಿದರು.
ಮೊದಲ ದಿನವಾದ ಮಾರ್ಚ್ 23ರಂದು ಇಬ್ಬರು ನಾಮಪತ್ರ ಸಲ್ಲಿಸಿದ್ದರು. 2ನೇ ದಿನ ಯಾರೂ ಸಲ್ಲಿಸಲಿಲ್ಲ. 3ನೇ ದಿನ ಒಬ್ಬರು, 4ನೇ ದಿನ ಒಬ್ಬರು, 5ನೇ ದಿನ 6 ಮಂದಿ ಮತ್ತು 6ನೇ ಹಾಗೂ ಕೊನೆಯ ದಿನವಾದ ಮಂಗಳವಾರ 15 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಪರಿಶೀಲನಾ ಕಾರ್ಯ ಬುಧವಾರ (ಮಾರ್ಚ್ 31) ನಡೆಯಲಿದೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.