ಬೆಳಗಾವಿ: ‘ಕೊರೊನಾ ಹಾಗೂ ಲಾಕ್ಡೌನ್ದಿಂದಾಗಿ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಡಿಮೆ ಇಲ್ಲದೇ, ಸಂಬಳ ಇಲ್ಲದೇ ಕಂಗಾಲಾಗಿರುವ ಇಂತಹ ಸಂದರ್ಭದಲ್ಲಿ ಆಸ್ತಿ ತೆರಿಗೆಯನ್ನು ಶೇ 25ರಷ್ಟು ಹೆಚ್ಚಿಸಿರುವುದು ಸರಿಯಲ್ಲ. ತಕ್ಷಣ ಈ ಆದೇಶವನ್ನು ವಾಪಸ್ ಪಡೆಯಬೇಕು’ ಎಂದು ಮಾಜಿ ನಗರ ಸೇವಕ ಅಸೋಸಿಯೇಷನ್ ಒತ್ತಾಯಿಸಿದೆ.
ಇಲ್ಲಿನ ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ಸಲ್ಲಿಸಿದ ಅವರು, ‘ಜನರ ಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ತೆರಿಗೆ ಏರಿಕೆಯನ್ನು ತಡೆಯಬೇಕು’ ಎಂದು ಮನವಿ ಮಾಡಿದರು.
‘2 ತಿಂಗಳ ಲಾಕ್ಡೌನ್ ಅವಧಿಯಲ್ಲಿ ಬಹಳಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಬಹಳಷ್ಟು ಜನರ ಬಳಿ ಹಣವಿಲ್ಲ. ಅದಕ್ಕಾಗಿ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟುನಿಟ್ಟಾಗಿ ತುಂಬುವಂತೆ ಪಾಲಕರಿಗೆ ಒತ್ತಾಯಿಸದಂತೆ ಶಾಲೆಗಳಿಗೆ ಸರ್ಕಾರ ಸೂಚನೆ ನೀಡಬೇಕು’ ಎಂದು ಆಗ್ರಹಿಸಿದರು.
‘ಲಾಕ್ಡೌನ್ ಅವಧಿಯಲ್ಲಿ ಪತ್ರಿಕಾಲಯಗಳಿಗೂ ಸಾಕಷ್ಟು ನಷ್ಟ ಉಂಟಾಗಿದೆ. ಎಷ್ಟೋ ಕಡೆ ಸಿಬ್ಬಂದಿಗಳಿಗೂ ವೇತನ ಪಾವತಿಸಲಾಗಿಲ್ಲ. ಕೇಂದ್ರ ಸರ್ಕಾರ ಶ್ರಮಿಕ ವರ್ಗದವರಿಗೆ ನೀಡುತ್ತಿರುವ ಪ್ಯಾಕೇಜ್ ಅಡಿ ಈ ಸಿಬ್ಬಂದಿಗಳಿಗೂ ಪರಿಹಾರ ನೀಡಬೇಕು’ ಎಂದು ಕೋರಿದರು.
ಅಧ್ಯಕ್ಷ ನಾಗೇಶ ಸಾತೇರಿ, ಉಪಾಧ್ಯಕ್ಷ ಗೋವಿಂದ ರಾವೂತ್, ನಿಂಗಪ್ಪ ನಿರ್ವಾಣಿ, ಶಿವಾಜಿ ಸುಂಠಕರ, ಧನರಾಜ್ ಗವಳಿ, ಇತರರು ಉಪಸ್ಥಿತರಿದ್ದರು.