ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ: ಕ್ರೇನ್ ಹರಿದು ವೃದ್ಧ ಸಾವು

Published 26 ಡಿಸೆಂಬರ್ 2023, 8:35 IST
Last Updated 26 ಡಿಸೆಂಬರ್ 2023, 8:35 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ದೇವಲಾಪುರ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಬುಧವಾರ ಕ್ರೇನ್ ಹರಿದು ವೃದ್ಧ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮದ ಸಾತೇರಿ ನಿಂಗಪ್ಪ ಠಕ್ಕೇಕರ (85) ಮೃತರು.

ದೇವಲತ್ತಿ ಗ್ರಾಮದಿಂದ ಬಸ್ ಮೂಲಕ ಬೈಲಹೊಂಗಲಕ್ಕೆ ಬಂದಿಳಿದಿದ್ದರು. ದೇವಲಾಪುರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ವೃದ್ಧ ನಡೆದುಕೊಂಡು ಬರುವಾಗ ಹಿಂಬದಿಯಿಂದ ಬಂದ ಕ್ರೇನ್ ಅವರ ತಲೆಯ ಮೇಲೆ ಹರಿದಿದೆ.

ಪೊಲೀಸರು ಸ್ಥಳ ಪರಿಶೀಲಿಸಿದರು. ಅಪಘಾತ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕ್ರೇನ್ ಚಾಲಕ ಸ್ಥಳದಲ್ಲಿಯೇ ಕ್ರೇನ್ ಬಿಟ್ಟು ಓಡಿ ಹೋದ.

'ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಬರುತ್ತಿದ್ದೇನೆ, ನೀನು ಆಸ್ಪತ್ರೆಗೆ ಬಾ ಎಂದಿದ್ದ ಅಪ್ಪ. ನಾನು ಆಸ್ಪತ್ರೆಗೆ ಮುಂಚಿತವಾಗಿ ಬಂದು ಕಾಯುತ್ತಿದ್ದೆ. ಸಮಯ ಆದರೂ ಅಪ್ಪ ಬರಲಿಲ್ಲ. ಆಸ್ಪತ್ರೆ ಹೊರಗಡೆ ಜನರ ಗುಂಪು ಸೇರಿತ್ತು. ಬಂದು ನೋಡುವಷ್ಟರಲ್ಲಿ ಗುರುತು ಪತ್ತೆ ಆಗದ ರೀತಿಯಲ್ಲಿ ಅಪಘಾತ ಆಗಿದೆ. ಅಪ್ಪ ಹಾಕಿದ್ದ ಬಟ್ಟೆ, ಕೇಸರಿ ಟವೆಲ್ ನೋಡಿ ಗುರುತಿಸಿದೆ' ಎಂದು ಮೃತ ವೃದ್ಧನ ಪುತ್ರ ಶಂಕರ ಸಾತೇರಿ ಠಕ್ಕೇಕರ ಕಣ್ಣೀರು ಹಾಕಿದರು.

ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT