ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ ಹರಡಿದ ಇಬ್ಬರ ವಿರುದ್ಧ ಪ್ರಕರಣ

Last Updated 26 ಮೇ 2019, 15:32 IST
ಅಕ್ಷರ ಗಾತ್ರ

ಬೆಳಗಾವಿ: ಹಿರೇಬಾಗೇವಾಡಿಯ ಎಪಿಎಂಸಿ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಶನಿವಾರ ಪತ್ತೆಯಾಗಿತ್ತು. ‘ಈ ಯುವಕ ಗೋವುಗಳ ಅಕ್ರಮ ಸಾಗಣೆ ವಿರುದ್ಧ ದನಿ ಎತ್ತಿದ್ದ. ಹೀಗಾಗಿ, ಕೊಲೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ಇಬ್ಬರ ವಿರುದ್ಧ ಗೋಕಾಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಗೋಕಾಕ ತಾಲ್ಲೂಕಿನ ಅಡಿವೆಪ್ಪನ ಅಂಕಲಗಿ ಗ್ರಾಮದ ಶಿವಕುಮಾರ ಉಪ್ಪಾರ (19) ಮೃತ.

ಘಟನೆ ಕುರಿತು ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಬೆಳಗಾವಿಯ ಶಾರದಾಂಬಿಕಾ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. 5–6 ತಿಂಗಳುಗಳಿಂದ ಬಜರಂಗ ದಳದಲ್ಲಿ ಕಾರ್ಯಕರ್ತನಾಗಿ, ಆ ಸಂಘಟನೆಯ ಹುಡುಗರೊಂದಿಗೆ ತಿರುಗಾಡುತ್ತಿದ್ದ. ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದರಿಂದ ಗಾಬರಿಗೊಂಡು ಹಿರೇಬಾಗೇವಾಡಿ ಎಪಿಎಂಸಿ ಮಾರ್ಕೆಟ್‌ನ ಸಾರ್ವಜನಿಕ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ’ ಎಂದು ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಕುರಿತು ಸುಳ್ಳು ಸುದ್ದಿ ಹಬ್ಬಿಸಿ, ದ್ವೇಷದ ಮನೋಭಾವಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಭಾನುವಾರ ಇಬ್ಬರನ್ನು ಬಂಧಿಸಲಾಗಿದೆ. ಕಂಕಣವಾಡಿಯ ಅರ್ಜುನ ಮುತ್ತೆಪ್ಪ ಬಸರಗಿ (31) ಹಾಗೂ ಸವದತ್ತಿ ತಾಲ್ಲೂಕು ಹಿರೇಕುಂಬಿಯ ಫಕ್ಕೀರಪ್ಪ ರಮೇಶ ತಳವಾರ (28) ಬಂಧಿತರು. ಇವರು ಕ್ರಮವಾಗಿ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದರು. ಎಲ್ಲ ಪೋಸ್ಟ್‌ಗಳನ್ನು ಕೂಡ ಪರಿಶೀಲಿಸಿದ್ದೇವೆ. ಹಿಂಸೆಗೆ ಪ್ರಚೋದಿಸುವ ಪೋಸ್ಟ್‌ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT