ಐಗಳಿ: ‘ಅಥಣಿ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ತೊಗರಿ ಬೆಳೆ ಒಣಗುತ್ತಿದೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸಿದ್ದು ಸರ್ಕಾರ ಸಮಗ್ರ ಸಮೀಕ್ಷೆ ನಡೆಸಿ ಯೋಗ್ಯ ಪರಿಹಾರ ನೀಡಬೇಕು. ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಬೇಕು’ ಎಂದು ಮುಖಂ ಕೇದಾರಿಗೌಡ ಬಿರಾದಾರ ಆಗ್ರಹಿಸಿದ್ದಾರೆ.
‘ಮಳೆಯಾಶ್ರಿತ ಪ್ರದೇಶದ ರೈತರ ಬದುಕು ದುಸ್ತರವಾಗಿದೆ. ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ಹೀಗಾಗಿ ತೊಗರಿ ಬೆಳೆ ಕೈಗೆ ಬರುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಬರಬೇಕು’ ಎಂದು ಮುಖಂಡರಾದ ಯಲ್ಲಪ್ಪ ಮಿರ್ಜಿ ಮತ್ತು ಶಂಕರಗೌಡ ಪಾಟೀಲ ಒತ್ತಾಯಿಸಿದ್ದಾರೆ.
‘ತೆಲಸಂಗ ಹೋಬಳಿಯಲ್ಲಿ 8ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಇದೆ. ಶೇ 80ರಷ್ಟು ನೀರಿನ ಕೊರತೆಯಿಂದ ಹಾಳಾಗಿದೆ. ಇದರ ಸಮಗ್ರ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ತಿಳಿಸಿದರು.