ಕಾಗವಾಡ/ಖಾನಾಪುರ (ಬೆಳಗಾವಿ ಜಿಲ್ಲೆ): ಕಾಗವಾಡ ತಾಲ್ಲೂಕಿನ ಶೇಡಬಾಳ ಮತ್ತು ಖಾನಾಪುರ ತಾಲ್ಲೂಕಿನ ಭಂಡರಗಾಳಿ ಬಳಿ ಭಾನುವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ.
ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಶೇಡಬಾಳ ಬಳಿ ಪಲ್ಟಿಯಾಗಿ, ರಸ್ತೆಬದಿ ಸಾಗುತ್ತಿದ್ದ ಮೂವರು ಮಹಿಳಾ ಕೂಲಿಕಾರರಿಗೆ ಡಿಕ್ಕಿ ಹೊಡೆದಿದೆ. ಮಾಲವ್ವ ರಾವಸಾಬ ಐನಾಪುರೆ(65), ಚಂಪಾ ಲಕ್ಕಪ್ಪ ತಳಕಟ್ಟಿ(45) ಹಾಗೂ ಭಾರತಿ ಸತ್ಯಪ್ಪ ಘಾಟಗೆ(42) ಸ್ಥಳದಲ್ಲಿಯೇ ಮೃತಪಟ್ಟರು. ಶೇಖವ್ವ ನರಸಪ್ಪ ನರಸಾಯಿ(45) ಗಂಭೀರವಾಗಿ ಗಾಯಗೊಂಡಿದ್ದು, ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಹಿಳೆಯರು ಹೊಲದಲ್ಲಿ ಜೋಳ ಕೀಳುವ ಕೆಲಸಕ್ಕೆ ಹೋಗಿ, ವಾಪಸ್ ಮನೆಗೆ ಬರುವಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜು ಕಾಗೆ ಭೇಟಿ ನೀಡಿ ಪರಿಶೀಲಿಸಿದರು. ಬಡ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಅಪಘಾತದಿಂದ ಮೀರಜ್– ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಇಬ್ಬರು ಯುವಕರ ಸಾವು: ಖಾನಾಪುರ ತಾಲ್ಲೂಕಿನ ಭಂಡರಗಾಳಿ ಗ್ರಾಮದ ಬಳಿ ಜೀಪು–ದ್ವಿಚಕ್ರ ವಾಹನದ ಮಧ್ಯೆ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬೇಕವಾಡದ ರಾಮಲಿಂಗ ಮುತಗೇಕರ್(20), ಹನುಮಂತ ಪಾಟೀಲ(19) ಮೃತರು. ‘ಇವರಿಬ್ಬರೂ ಸೈನಿಕ ತರಬೇತಿ ಪಡೆಯುವುದಕ್ಕಾಗಿ ಬೆಳಗಾವಿ ತಾಲ್ಲೂಕಿನ ನಂದಿಹಳ್ಳಿಯತ್ತ ತೆರಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.