ಬೆಳಗಾವಿ: ಗೋಕಾಕದ ಮಾಜಿ ಶಾಸಕ ಚಂದ್ರಶೇಖರ ಗುಡ್ಡಾಕಾಯು (91) ಅವರು ಇಲ್ಲಿನ ಮಹಾಂತೇಶನಗರದ ನಿವಾಸದಲ್ಲಿ ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು. ಅವರಿಗೆ ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ.
ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಚಂದ್ರಶೇಖರ ಅವರು 1972ರಲ್ಲಿ ಗೋಕಾಕ ಶಾಸಕರಾಗಿದ್ದರು. ಅದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರೊಬ್ಬರ ಆಪ್ತ ಕಾರ್ಯದರ್ಶಿ ಆಗಿದ್ದರು. ಆಗ ರಾಯಬಾಗದ ನಾಯಕರಾಗಿದ್ದ ವಸಂತರಾವ್ ಪಾಟೀಲ ಅವರು ಗುಡ್ಡಾಕಾಯು ಅವರನ್ನು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಡಿಸಿ ಗೋಕಾಕದಲ್ಲಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿದ್ದರು.
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅವರು 28,005 ಮತ ಪಡೆದಿದ್ದರು. ಸಂಸ್ಥಾ ಕಾಂಗ್ರೆಸ್ನ ಬಿ.ಎಂ. ಪಾಟೀಲ 11,144 ಮತ ಪಡೆದು ಪರಾಭವಗೊಂಡಿದ್ದರು. 1978ರ ವಿಧಾನಸಭಾ ಚುನಾವಣೆಯಲ್ಲಿ ಗುಡ್ಡಾಕಾಯು ಪರಾಭವಗೊಂಡರು. ನಂತರ ಅವರು ರಾಜಕೀಯದಿಂದ ದೂರ ಉಳಿದಿದ್ದರು.