ಬಳ್ಳಾರಿ: ಶಿವಕುಮಾರ ಸ್ವಾಮಿಜಿಯವರ 111ನೇ ಜನ್ಮದಿನದ ಪ್ರಯುಕ್ತ ನಗರದ ದುರ್ಗಮ್ಮ ಗುಡಿ ವೃತ್ತದಲ್ಲಿ ಭಾನುವಾರ ವೀರಶೈವ ಲಿಂಗಾಯತ ಯುವವೇದಿಕೆ ಮುಖಂಡರು ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಪುಳಿಯೋಗರೆ ವಿತರಿಸಿದರು.ಕಮ್ಮರಚೇಟು ಮಠದ ಕಲ್ಯಾಣ ಸ್ವಾಮೀಜಿ ಹಾಗೂ ಮುಖಂಡ ಚಾನಾಳ್ ಶೇಖರ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅಂಗಡಿ ಶಂಕರ್, ‘ನಾಡಿನ ನಡೆದಾಡುವ ದೇವರು ಎಂದೇ ಖ್ಯಾತರಾದ ಶಿವಕುಮಾರ ಸ್ವಾಮೀಜಿ 111ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ವರ್ಷವೂ ಅವರ ಜನ್ಮದಿನದಂದು ವೇದಿಕೆಯು ಅನ್ನದಾನ ಮಾಡುತ್ತಿದೆ’ ಎಂದು ತಿಳಿಸಿದರು.
ವೇದಿಕೆಯ ಮುಖಂಡರಾದ ಮಂಜುನಾಥ ಬೆಳ್ಳಿಗಾರ್, ಕೆ.ಎಂ. ಶಿವಕುಮಾರಸ್ವಾಮಿ, ತೋಟದ ವಿರೇಶ್, ತಿಪ್ಪಾರೆಡ್ಡಿ, ಕಂಚಿ ಬಸವರಾಜ, ನಾಡಚಂದ್ರಮೋಹನ್ ಇದ್ದರು.
ಅನ್ನದಾನ
ಬಳ್ಳಾರಿ ನಗರದ ದೊಡ್ಡ ಮಾರುಕಟ್ಟೆ ಸಮೀಪವಿರುವ ನೀಲಕಂಠೇಶ್ವರ ದೇವಾಲಯ ಮುಂಭಾಗ ಕರ್ನಾಟಕ ಯುವಕ ಸಂಘದ ಸದಸ್ಯರು ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.