ಗೋಕಾಕ (ಬೆಳಗಾವಿ ಜಿಲ್ಲೆ): ಗೋಕಾಕ ತಾಲ್ಲೂಕಿನ ಮೇಲ್ಮಟ್ಟಿ ಗ್ರಾಮದವರಾದ, ಸೈನಿಕ ಶಂಕರ ಬಾಳಪ್ಪ ಯಲಿಗಾರ (33) ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದನಲ್ಲಿ ಮಂಗಳವಾರ ಮಧ್ಯಾಹ್ನ ಕೆಲಸದಲ್ಲಿ ಇದ್ದಾಗಲೇ ಅವರಿಗೆ ಹೃದಯಾಘಾತವಾಯಿತು. ತಕ್ಷಣ ಅವರನ್ನು ಔರಂಗಾಬಾದನ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟೊತ್ತಿಗೆ ಅವರು ಕೊನೆಯುಸಿರು ಎಳೆದಿದ್ದರು ಎಂಬ ಮಾಹಿತಿ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಮೃತದೇಹವನ್ನು ಮೇಲ್ಮಟ್ಟಿ ಗ್ರಾಮದ ಕಡೆಗೆ ತರಲಾಗುತ್ತಿದ್ದು, ಬುಧವಾರ ಬೆಳಿಗ್ಗೆ 8ರ ಸುಮಾರಿಗೆ ಸ್ವಗ್ರಾಮ ತಲುಪಲಿದೆ. ಗ್ರಾಮಸ್ಥರು ಶವವನ್ನು ಊರಲ್ಲಿ ಮೆರವಣಿಗೆ ಮಾಡಿ, ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.