ತೆಲಸಂಗ: ‘ಹವಾಮಾನ ವೈಪರೀತ್ಯದ ಕಾರಣ ದ್ರಾಕ್ಷಿ ಬೆಳೆಗಾರರು ಹಾನಿ ಅನುಭವಿಸುವಂತಾಗಿದೆ. ರೈತರ ಉಳುವಿಗಾಗಿ ದ್ರಾಕ್ಷಿ ಬೆಳೆಗೆ ಹೊಸ ನೀತಿ ತರಬೇಕು’ ಎಂದು ದ್ರಾಕ್ಷಿ ಕ್ಲಸ್ಟರ್ ಅಧ್ಯಕ್ಷ ಶಹಜಹಾನ್ ಡೊಂಗರಗಾಂವ ಒತ್ತಾಯಿಸಿದ್ದಾರೆ.
‘ಗುರುವಾರ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಆಗಿದೆ. ಇದಕ್ಕೆ ಪರಿಹಾರ ನೀಡಬೇಕು. ದ್ರಾಕ್ಷಿ ಬೆಳೆಯ ಆರಂಭದಿಂದ ಹಿಡಿದು ಅದನ್ನು ಸಂಸ್ಕರಿಸಿ, ಶೈತ್ಯಾಗಾರದಲ್ಲಿ ಇಡುವವರೆಗೂ ಹಾನಿಯಾದಲ್ಲಿ ವಿಮೆ ನೀಡಬೇಕು’ ಎಂದಿದ್ದಾರೆ.
‘ದ್ರಾಕ್ಷಿ ಬೆಳೆಗಾರೆರಿಗೆ ಸಂಸ್ಕರಣಾ ಪದ್ಧತಿ ನೀತಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ನೀತಿ ಸಂಹಿತಿ ಜಾರಿಗೂ ಮುನ್ನ ಸಂಪುಟ ಸಭೆ ಕರೆದು ನಿರ್ಣಯ ಜಾರಿಮಾಡಬೇಕು. ಅಧಿಕಾರಿಗಳು ಸರಿಯಾಗಿ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಚುನಾವಣಾ ಹೊಸ್ತಿಲಲ್ಲಿ ರೈತರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ತೆಲಸಂಗ ಗ್ರಾಮವೂ ಸೇರಿದಂತೆ ಅಥಣಿ ತಾಲ್ಲೂಕಿನ ಬನ್ನೂರ, ಕಕಮರಿ, ಕನ್ನಾಳ, ಹಾಲಳ್ಳಿ, ಕೊಟ್ಟಲಗಿ, ಫಡತರವಾಡಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಬುಧವಾರ ರಾತ್ರಿ ಬಿರುಗಾಳಿ ಹಾಗೂ ತುಂತುರು ಮಳೆಯ ಕಾರಣ ಬಿಳಿಜೋಳ ಮತ್ತು ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.