ಹಂದಿಗುಂದ: ರಾಯಬಾಗ ತಾಲ್ಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಇಲ್ಲಿನ ಸಿದ್ಧೇಶ್ವರ ವಿರಕ್ತ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಮ್ಮೇಳನದ ಅಧ್ಯಕ್ಷ ಐ.ಆರ್. ಮಠಪತಿ ಉಪಸ್ಥಿತರಿದ್ದರು.
ನಂತರ ಪರಿಷತ್ತಿನ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಪಾಟೀಲ ನೆರವೇರಿಸಿದರು. ನಾಡ ಧ್ವಜಾರೋಹಣವನ್ನು ಕಸಾಪ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಮಂಗಲಾ ಮೆಟಗುಡ್ಡ ಮಾಡಿದರು. ಹಂದಿಗುಂದದ ನಿವೃತ್ತ ಯೋಧ ಬಾಳಾಸಾಹೇಬ ಅಣ್ಣಪ್ಪ ಸಬರದ ರಾಷ್ಟ್ರ ಧ್ವಜಾರೋಹಣ ಮಾಡಿದರು. ತಹಶೀಲ್ದಾರ್ ಪ್ರಶಾಂತ ಎಸ್. ಚನಗೊಂಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಮಹಾದೇವ ಹೆಗ್ಗಾಣಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಬಿಇಒ ಬಸವರಾಜಪ್ಪ, ಸಿಡಿಪಿಒ ಸಂತೋಷ ಕುಮಾರ ಕಾಂಬಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಭಾಷ ವಲ್ಯಾಪೂರ, ಡಿ.ಎಸ್. ನಾಯಕ, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಖಾನಗೌಡ, ಕಸಾಪ ಕಾರ್ಯದರ್ಶಿ ಶಂಕರ ಕ್ಯಾಸ್ತಿ, ಕವಯತ್ರಿ ರತ್ನ ಬಾಳಪ್ಪನವರ, ಲತಾ ಹುದ್ದಾರ, ಟಿ.ಎಸ್. ವಂಟಗೋಡಿ ಇದ್ದರು.