ಬೆಳಗಾವಿ: ಒಂದು ಕಾಲದಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಹಾಗೂ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತು. ಈಗ ಪೈಪೋಟಿ ಕಂಡುಬರುತ್ತಿದೆ. ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗೋಕಾಕದಲ್ಲಿ ಭಾನುವಾರ ನಡೆದ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬೇರೆ ಕಡೆಯವರನ್ನು ತಂದು ಇಲ್ಲಿ ನಿಲ್ಲಿಸುತ್ತಿದ್ದೆವು. ಸೋಲುತ್ತೇವೆ ಎನ್ನುವುದು ಗೊತ್ತಿತ್ತು. ಆದರೆ ಪಕ್ಷದ ಚಿಹ್ನೆ ಜನರ ಮನದಲ್ಲಿ ಅಚ್ಚೊತ್ತಬೇಕು. ಮುಂದೆಯಾದರೂ ಗೆಲ್ಲುತ್ತೇವೆ ಎಂ ವಿಶ್ವಾಸದಲ್ಲಿರುತ್ತಿದ್ದೆವು. ಆ ಕನಸು ಈಗ ನನಸಾಗಿದೆ’ ಎಂದರು.
‘ಜನರು ಈಗ ಸಂಪೂರ್ಣವಾಗಿ ಬಿಜೆಪಿಯನ್ನು ಒಪ್ಪಿದ್ದಾರೆ. ಹೀಗಾಗಿ ಪದಾಧಿಕಾರಿಗಳ ಕೆಲಸ ಈಗ ಸುಲಭವಾಗಿದೆ. ಮತ ಗಳಿಕೆ ಹೆಚ್ಚಾಗಬೇಕೇ ಹೊರತು ಕಡಿಮೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಪದಾಧಿಕಾರಿಗಳಿಗೆ ಸೂಚಿಸಿದರು.
‘ಪಕ್ಷ, ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸೇತುವೆಯಾಗಿ ಮೋರ್ಚಾಗಳು ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳನ್ನು ತಿಳಿಸಿ, ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು’ ಎಂದು ತಿಳಿಸಿದರು.
‘ಯುವಕರು ಹೊಸ ನಾಯಕತ್ವವನ್ನು ಬಯಸುತ್ತಿದ್ದಾರೆ. ಹೀಗಾಗಿ ಎಲ್ಲ ವರ್ಗದಲ್ಲೂ ಯುವಕರನ್ನು ಬೆಳೆಸಲು ನಾವು ಮುಂದಾಗಬೇಕಿದೆ. ಪದಾಧಿಕಾರಿ ಹುದ್ದೆಯ ಆಯುಧವನ್ನು ಬಳಸಿಕೊಂಡು ವೈಯಕ್ತಿಕವಾಗಿ ಬೆಳೆಯುವ ಜೊತೆಗೆ ಪಕ್ಷವನ್ನೂ ಬೆಳೆಸಬೇಕು’ ಎಂದು ಸಲಹೆ ನೀಡಿದರು.