ಬೆಳಗಾವಿ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನವನ್ನೇ ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತಿರುವ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಈ ಸಂದರ್ಭದಲ್ಲಿ ಜನರ ಸೇವೆಗೋಸ್ಕರ ಎರಡು ಆಂಬುಲೆನ್ಸ್ಗಳನ್ನು ಬುಧವಾರ ಸಮರ್ಪಿಸಿದರು.
‘ಕೊರಿನಾದಿಂದಾಗಿ ಜನರು ಎಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವ ಅರಿವಿದೆ. ನಾನು ಕೂಡ ಬಹಳಷ್ಟು ನೋವು ಅನುಭವಿಸಿದ್ದೇನೆ. ಆದಷ್ಟು ಬೇಗ ಇಂತಹ ಪರಿಸ್ಥಿತಿಯಿಂದ ಎಲ್ಲರೂ ಪಾರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕ್ಷೇತ್ರದ ಜನರು ಪಕ್ಷಾತೀತವಾಗಿ ಈ ಎರಡು ಆಂಬುಲೆನ್ಸ್ಗಳನ್ನು ಬಳಸಿಕೊಳ್ಳಬೇಕು’ ಎಂದು ಕೋರಿದರು.
‘ಕ್ಷೇತ್ರದ ಜನರು ಹಾಸಿಗೆ, ಚುಚ್ಚುಮದ್ದು, ಆಮ್ಲಜನಕಕ್ಕಾಗಿ ಫೋನ್ ಮಾಡುತ್ತಿದ್ದಾರೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ನನ್ನ ಕೈಯಿಂದ ಸಾಧ್ಯವಾದಷ್ಟು ನೆರವು ನೀಡುತ್ತಿದ್ದೇನೆ. ಎಲ್ಲರೂ ಜಾಗೃತಿಯಿಂದ ಇರಬೇಕು’ ಎಂದು ಮನವಿ ಮಾಡಿದರು.