ಬೆಳಗಾವಿ: ‘ವಿದ್ಯಾರ್ಥಿಗಳು ಮತ್ತು ಯುವಜನರು ತಮ್ಮ ಶಕ್ತಿ–ಯುಕ್ತಿಯನ್ನು ದೇಶದ ಅಭಿವೃದ್ಧಿಗಾಗಿ ಬಳಸಬೇಕು’ ಎಂದು ಪ್ರಾಂಶುಪಾಲ ಡಾ.ಸಿ.ಎಸ್. ನಾಯ್ಕರ ಸಲಹೆ ನೀಡಿದರು.
ಇಲ್ಲಿನ ನಾಯ್ಕರ ಶಿಕ್ಷಣ ಸಂಸ್ಥೆಯ ಆರ್ಟಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಲಕ್ಷ್ಯ-2019’ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸುಭದ್ರ ಭಾರತ ನಿರ್ಮಿಸಲು ಬೇಕಿರುವುದು ಯುವಶಕ್ತಿ. ಅವರಿಂದ ಮಾತ್ರ ಭಾರತವು ವಿಶ್ವ ಭೂಪಟದಲ್ಲಿ ಮಿಂಚಲು ಸಾಧ್ಯ. ಸಾಧಕರ ಜೀವನ ಸ್ಫೂರ್ತಿಯಾಗಬೇಕು. ಕಷ್ಟಗಳು, ಸವಾಲುಗಳು ಎದುರಾದರೂ ಕುಗ್ಗಬಾರದು’ ಎಂದು ತಿಳಿಸಿದರು.
ನಿವೃತ್ತ ಅಬಕಾರಿ ಆಯುಕ್ತ ಎನ್.ವಿ. ಖೋಜಾ ಮಾತನಾಡಿ, ‘ವಿದ್ಯಾರ್ಥಿಯು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಅದನ್ನು ತಲುಪಲು ಶ್ರಮಿಸಬೇಕು’ ಎಂದರು.
ವಿವಿಧ ಸ್ಪರ್ಧೆಗಳಲ್ಲಿ 55 ಶಾಲೆಗಳ 1,500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂತ ಫಾಲ್ಸ್ ಶಾಲೆ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು. ಡಿವೈನ್ ಪ್ರಾವಿಡೆನ್ಸ್ ಶಾಲೆ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದರು.
ನಾಯ್ಕರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶ್ವೇತಾ ಸಿ. ನಾಯ್ಕರ ಇದ್ದರು.