ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಬಳಿ ಬುಧವಾರ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರ ಕಾರುಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಸವದಿ ಅವರೂ ಸೇರಿದಂತೆ ಕಾರಿನಲ್ಲಿದ್ದ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋಕಾಕದಿಂದ ಮರಳಿ ಅಥಣಿ ಕಡೆಗೆ ಹೊರಟಾಗ, ಹಾರೂಗೇರಿ ಕ್ರಾಸ್ ಬಳಿ ಬೈಕೊಂದು ಏಕಾಏಕಿ ಕಾರಿಗೆ ಅಡ್ಡಬಂತು. ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಅವಸರದಲ್ಲಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಗೆ ಬೋರಲು ಬಿದ್ದಿತು.
ಕಾರು ಚಾಲಕ ಹಾಗೂ ಪಕ್ಕದಲ್ಲಿ ಕುಳಿತಿದ್ದ ಲಕ್ಷ್ಮಣ ಸವದಿ ಅವರ ತಲೆ, ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿಂಬದಿ ಸೀಟಿನಲ್ಲಿದ್ದ ಗನ್ ಮ್ಯಾನ್ ಹಾಗೂ ಇನ್ನೊಬ್ಬರೂ ಬಚಾವಾಗಿದ್ದಾರೆ.
ಹಾರೂಗೇರಿ ಪಟ್ಟಣದ ಸಮೀಪದಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ಲಕ್ಷ್ಮಣ ಸವದಿ ಅವರನ್ನು ಭೇಟಿಯಾದ ಶಾಸಕ ಪಿ.ರಾಜೀವ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಆರೋಗ್ಯ ವಿಚಾರಿಸಿದರು
ಅಪಘಾತವಾದ ತಕ್ಷಣ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಸಂಭವನೀಯ ಅಪಾಯ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಪಲ್ಟಿಯಾಗುತ್ತಿದ್ದಂತೆ ಸುತ್ತಲಿನ ಜನ ಸಹಾಯಕ್ಕೆ ಧಾವಿಸಿದರು.
ನಂತರ ಸವದಿ ಅವರನ್ನು ಅಥಣಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.