ಸವದತ್ತಿ: ‘ಸಮಾಜದ ಸಾಮರಸ್ಯ ಹೆಚ್ಚಿಸಿ ಪರಸ್ಪರ ಉನ್ನತಿಗಾಗಿ ಸಹೋದರತ್ವ ಮನೋಭಾವ ಬೆಳೆಸಲು ಕಾನೂನು ಸೇವಾ ಸಮಿತಿ ಸದಾ ಕಾರ್ಯೋನ್ಮುಖವಾಗಿದೆ’ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಶಶಿಧರ ಎಂ.ಗೌಡ ಹೇಳಿದರು.
ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಹುವರ್ಷಗಳಿಂದ ಬಾಕಿ ಉಳಿದ ವ್ಯಾಜ್ಯಗಳ ಇತ್ಯರ್ಥಕ್ಕೆ ಲೋಕ್ ಅದಾಲತ್ ಸಹಕಾರಿಯಾಗಿದೆ. ಜನತೆಗೆ ಕಾನೂನಿನ ಅರಿವಿನ ಜೊತೆಗೆ ನೆರವು ನೀಡುವ ಕಾರ್ಯವನ್ನು ಇಲ್ಲಿನ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಯಶಸ್ವಿಯಾಗಿ ಮುನ್ನಡೆಸುತ್ತಿವೆ. ಪ್ರತಿಯೊಬ್ಬರೂ ಕಾನೂನು ಪೂರಕ ಸಮಾಜ ನಿರ್ಮಿಸುವಲ್ಲಿ ಸಹಕಾರ ನೀಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಮುತ್ತಿನ ಮಾತನಾಡಿ, ಈಚೆಗೆ ಸ್ವ-ಪ್ರತಿಷ್ಠೆಗಾಗಿ ಅಸೂಯೆ-ದ್ವೇಷ ಭಾವನೆಗಳಿಂದ ಕಾನೂನುಬಾಹಿರ ಚಟುವಟಿಕೆಗಳ ಸಂಖ್ಯೆ ಹೆಚ್ಚುತ್ತಿವೆ. ಇದರಿಂದ ಸಮಾಜದಲ್ಲಿನ ಸ್ವಾಸ್ಥ್ಯ ಕದಡುತ್ತಿದೆ. ಪ್ರತಿ ಪ್ರಜೆ ಕಾನೂನಿನ ಕುರಿತು ಜ್ಞಾನ ಹೆಚ್ಚಿಸಿಕೊಂಡು ಸಾಮರಸ್ಯದ ಬದುಕು ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ಹಿರಿಯ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ, ಸಹಾಯಕ ಸರ್ಕಾರಿ ಅಭಿಯೋಜಕಿ ಆಫಿಯಾ ನೇಸರಿಕರ, ಉಪಾಧ್ಯಕ್ಷ ಜೆ.ಬಿ. ಮುನವಳ್ಳಿ, ಕಾರ್ಯದರ್ಶಿ ಎಂ.ಎಫ್. ಬಾಡಿಗೇರ, ಸುನೀತಾ ಗೊಂದಕರ, ಬಿ.ಎಂ, ಯಲಿಗಾರ, ಸುರೇಶ ಕಾಳಪ್ಪನವರ ಹಾಗೂ ವಕೀಲರು ಇದ್ದರು.