ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರು, ಸ್ವಾಮೀಜಿ, ಸಾಹಿತಿಗಳು, ನಟರಿಗೆ ಕೊಲೆ ಬೆದರಿಕೆ ಪತ್ರ

Published 30 ಸೆಪ್ಟೆಂಬರ್ 2023, 10:55 IST
Last Updated 30 ಸೆಪ್ಟೆಂಬರ್ 2023, 10:55 IST
ಅಕ್ಷರ ಗಾತ್ರ

ಬೈಲೂರು (ಬೆಳಗಾವಿ ಜಿಲ್ಲೆ): ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಮತ್ತೊಂದು ಕೊಲೆ ಬೆದರಿಕೆ ಪತ್ರ ಬಂದಿದೆ. ಇದರಲ್ಲಿ ನಿಜಗುಣಾನಂದ ಸ್ವಾಮೀಜಿ, ಸಚಿವರಾದ ಸತೀಶ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್ ಹಾಗೂ ಪ್ರಗತಿಪರ ವಿಚಾರವಾದಿ ಸಾಹಿತಿಗಳು, ನಟರಿಗೂ ಕೊಲೆ ಬೆದರಿಕೆ ಒಡ್ಡಲಾಗಿದೆ.

ಆಗಸ್ಟ್‌ 8ರಂದು ಕೂಡ ಸ್ವಾಮೀಜಿ ಕೊಲೆ ಮಾಡುವುದಾಗಿ ಅನಾಮಿಕ ಪತ್ರ ಬಂದಿತ್ತು. ಶ್ರೀಗಳು ಕಿತ್ತೂರು ಪೊಲೀಸ್‌ ಠಾಣೆಗೆ ದೂರು ಕೂಡ ನೀಡಿದ್ದಾರೆ. ಮತ್ತೊಮ್ಮೆ ಸೆ.20ರಂದು ಇಂಥದ್ದೇ ಬೆದರಿಕೆ ಪತ್ರ ಬಂದಿದೆ. ಈ ಪತ್ರದಲ್ಲಿ ಶ್ರೀಗಳು ಮಾತ್ರವಲ್ಲ; ಮೂವರು ಸಚಿವರು, 10 ಸಾಹಿತಿಗಳು, ಇಬ್ಬರು ಚಲನಚಿತ್ರ ನಟರ ಹೆಸರನ್ನೂ ಬರೆಯಲಾಗಿದೆ.

ಸಾಹಿತಿಗಳಾದ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ, ಭಾಸ್ಕರ ಪ್ರಸಾದ್, ಪ್ರೊ.ಭಗವಾನ್, ಪ್ರೊ.ಮಹೇಶ್ ಚಂದ್ರ ಗುರು, ಬಿ.ಟಿ.ಲಲಿತಾ ನಾಯಕ್, ಬಿ.ಎಲ್. ವೇಣು, ಧ್ವಾರಕಾನಾಥ, ನಟರಾದ ಚೇತನ್ ಹಾಗೂ ಪ್ರಕಾಶ್‌ ರಾಜ್‌ ಹೆಸರು ಪತ್ರದಲ್ಲಿದೆ. ಕೆಲವು ಪ್ರಶ್ನೆಗಳನ್ನು ಮಾಡಿರುವ ವ್ಯಕ್ತಿ, ಇವುಗಳಿಗೆ ಉತ್ತರ ಕೊಡಿ’ ಎಂದು ಕೀಳುಪದ ಬಳಸಿದ್ದಾನೆ.

‘ಮುಸ್ಲಿಮರು, ಪಾಕಿಸ್ತಾನಿಗಳು, ಭಯೋತ್ಪಾದಕರು ಮಾಡುರುವುದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದಿಯೇ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡುತ್ತಿರುವುದು ತಪ್ಪು ‌ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ? ಧೈರ್ಯವಿದ್ದರೆ ಹೇಳಿ ಇಲ್ಲವಾದರೆ ನಿಮ್ಮ ಕೊನೆಯ ‌ದಿನಗಳನ್ನು ಎಣಿಸಿ’ ಎಂದ ಅನಾಮಿಕ ಪ್ರಶ್ನಿಸಿದ್ದಾನೆ.

‘ನಿಜಗುಣಾನಂದ ನಾನು ಬರೆದಿರುವ ಪತ್ರ ‘ಪ್ರೇಮಪತ್ರ’ ಅಂತಾದರೂ ತಿಳಿ ಅಥವಾ ‘ಸಾವಿನ ಪತ್ರ’ ಅಂತಾದರೂ ತಿಳಿ. ನಾನು ನಿನ್ನ ಜತೆ ತಮಾಷೆ‌ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಸಾವು ಬರುತ್ತದೆ’ ಎಂದು ಶ್ರೀಗಳಿಗೆ ಜೀವಬೆದರಿಕೆ ಹಾಕಲಾಗಿದೆ.

‘ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ‌ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದೀಯ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ. ನಿನ್ನಂಥ ದುಷ್ಟ ರಾಕ್ಷಸಿ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂಬ ಪದ ಬಳಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT