ಕೌಜಲಗಿ: ಹಸಿದು ಬಂದವರಿಗೆ ಅನ್ನ ಹಾಕಿ. ದುಡಿದವರಿಗೆ ದುಡ್ಡು ಕೊಡಿ ಅವರಲ್ಲಿ ದೇವರು ಇರುವನು. ದೇಶ ಕಾಯೋ ಸೈನಿಕ, ಅನ್ನ ಕೊಡುವ ರೈತ ಸಕಲರಿಗೂ ಎರಡು ಕಣ್ಣಿದ್ದಂತೆ ಅವರನ್ನು ಗೌರವಿಸಿ ಎಂದು ಬಬಲಾದಿ ಮಠದ ಸಿದ್ದರಾಮಯ್ಯ ಅಜ್ಜನವರು ಹೇಳಿದರು.
ಸಮೀಪದ ಹೊನಕುಪ್ಪಿ ಗ್ರಾಮದ ಚಂದ್ರಮ್ಮದೇವಿ ಕೈವಲ್ಯ ಮಠದಲ್ಲಿ ಮಂಗಳವಾರ ಜರುಗಿದ ನವರಾತ್ರಿ ಉತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ವಚನ, ದೇಶಭಕ್ತಿ ಸಾರುವ ಪುಸ್ತಕ ಕೊಡುವುದನ್ನು ಪಾಲಕರು ಕಲಿಸಬೇಕಾಗಿದೆ. ಬಬಲಾದಿ ಶ್ರೀಮಠ ಅಂದು ತೀರ್ಥ ಮಠವಾಗಿತ್ತು. ಇಂದು ಮಾತೆಯರಿಂದ ಅಂಬಲಿ ಮಠವಾಗಿದೆ ಎಂದರು.
ಮೆರವಣಿಗೆಯು ಗ್ರಾಮದ ಕನಕದಾಸರ ವೃತ್ತದಿಂದ ಸುಮಂಗಲೆಯರ ಆರತಿ, ಸಕಲ ವಾದ್ಯ ಮೇಳಗಳೊಂದಿಗೆ, ಬಬಲಾದಿ ಶ್ರೀಗಳನ್ನು ಚಂದ್ರಮ್ಮದೇವಿ ಮಠಕ್ಕೆ ಬರಮಾಡಿಕೊಳ್ಳಲಾಯಿತು.