ಬೆಳಗಾವಿ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರೈತ ಸಂಘಟನೆ ನೇತೃತ್ವದಲ್ಲಿ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.
‘ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿ ರೈತರ ಹಿತವನ್ನು ಕಡೆಗಣಿಸಿ ಎಪಿಎಂಸಿಯ ಖಾಸಗೀಕರಣಕ್ಕೆ ಮುಂದಾಗಿರುವ ಔಚಿತ್ಯವೇನು? ಇದು ರೈತ ಸಮುದಾಯಕ್ಕೆ ಆಶ್ಚರ್ಯವಾಗಿದೆ. ಈಗಿರುವ 1966ರ ಎಪಿಎಂಸಿ ಕಾಯ್ದೆಯು ರೈತರ ಹಿತವನ್ನೇ ಪ್ರಧಾನವಾಗಿರಿಸಿಕೊಂಡಿದೆ. ತಿದ್ದುಪಡಿ ಮಾಡುವ ಮೂಲಕ ಖಾಸಗೀಕರಣ ಮಾಡಿದರೆ ಅವರು ತಮ್ಮ ಕಂಪನಿಯ ಲಾಭ ಪರಿಗಣಿಸುತ್ತಾರೆಯೇ ಹೊರತು ರೈತರ ಹಿತವನ್ನಲ್ಲ. ಹೀಗಾಗಿ, ರೈತರ ಹಿತಕ್ಕೆ ಧಕ್ಕೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಅಧಿನಿಯಮಗಳನ್ನು ಗಾಳಿಗೆ ತೂರಿ ಎಪಿಎಂಸಿ ಮಾರುಕಟ್ಟೆಯನ್ನು ಖಾಸಗೀಕರಣ ಮಾಡುವುದದರಿಂದ ಸಮಸ್ತ ರೈತ ಸಮುದಾಯ ಬೀದಿಗೆ ಬಂದು ಕೃಷಿ ವಲಯ ಬಿಕ್ಕಟ್ಟಿಗೆ ಸಿಲುಕುತ್ತದೆ. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಗಿ ಆಹಾರ ಅಭದ್ರತೆ ಉಂಟಾಗುತ್ತದೆ. ರೈತರ ಮರಣ ಶಾಸನವನ್ನು ಸರ್ಕಾರವೇ ಬರೆದಂತಾಗುತ್ತದೆ. ರೈತರ ಹಕ್ಕು ಕಿತ್ತುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹರಣ ಮಾಡಿದಂತಾಗುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ದುಡಿಯುವ ಸಾವಿರಾರು ಕೈಗಳ ಕೆಲಸ ಕಿತ್ತುಕೊಂಡತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಈಗಾಗಲೇ ಕೃಷಿ ವಲಯ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕಾನೂನು ಜಾರಿಯಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಭದ್ರತೆ ಇಲ್ಲದೆ ಸರ್ಕಾರವೆ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟಂತಾಗುತ್ತದೆ. ಇದನ್ನು ಪರಿಗಣಿಸದೆ ಖಾಸಗೀಕರಣಕ್ಕೆ ಮುಂದಾದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರೈತ ಮುಖಂಡರಾದ ಪ್ರಕಾಶ ನಾಯಕ, ಅಡಿವೆಪ್ಪ ಕುಂದರಗಿ, ಉಮೇಶ ಕೊಣ್ಣೂರಿ ಇದ್ದರು.