ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು ಕೋಟೆಯ ಸಮೀಪದಲ್ಲೇ ಅರಮನೆ ಪ್ರತಿರೂಪ ನಿರ್ಮಾಣ ಮಾಡಬೇಕು. ಸ್ಥಳ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿ ನಾಗರಿಕರು ಮಂಗಳವಾರ ಕರೆ ನೀಡಿದ್ದ ಕಿತ್ತೂರು ಬಂದ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಲ್ಲಿನ ಸೋಮವಾರ ಪೇಟೆ, ಗುರುವಾರ ಪೇಟೆ, ಮುಖ್ಯ ನಿಲ್ದಾಣದ ಬಳಿಯ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಬಂದ್ ಪ್ರಯುಕ್ತ ಬೈಕ್, ಆಟೊರಿಕ್ಷಾ, ಕಾರ್, ಕ್ರೂಸರ್ ಒಳಗೊಂಡ ವಾಹನಗಳ ಮೆರವಣಿಗೆ ಕೂಡ ಆಯೋಜಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಬಳಿಯ ವರ್ತುಲದಲ್ಲಿ ಜಮಾವಣೆ ಆದ ನಾಗರಿಕರನ್ನು ಉದ್ದೇಶಿಸಿ ಕಲ್ಮಠ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಕಿತ್ತೂರಲ್ಲಿಯೇ ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಆಗ್ರಹಿಸಿ ನಡೆಯುತ್ತಿರುವ ಕಿತ್ತೂರು ಬಂದ್ ನಲ್ಲಿ ನಾಗರಿಕರು ಶಾಂತ ರೀತಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
ಬಾಬಾಸಾಹೇಬ ಪಾಟೀಲ, ಹಬೀಬ ಶಿಲೇದಾರ್, ಅನಿಲ ಎಮ್ಮಿ, ಬಸವರಾಜ ಸಂಗೊಳ್ಳಿ, ಸಿದ್ದು ಮಾರಿಹಾಳ, ಎಂ. ಎಫ್. ಜಕಾತಿ ನೂರಾರು ನಾಗರಿಕರು ಇದ್ದರು. ಕಿತ್ತೂರಿಂದ ಬೆಳಗಾವಿ ಕಡೆಗೆ ಕಡೆಗೆ ವಾಹನ ಜಾಥಾ ತೆರಳಿತು.
ಅಲ್ಲಿ ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.