ಅಥಣಿ: ‘ಹಲವು ವರ್ಷಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ತಮಗೆ ವೇತನ ಹೆಚ್ಚಿಸಬೇಕು ಮತ್ತು ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿ ಉಪನ್ಯಾಸಕರರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.
ಉಪನ್ಯಾಸಕ ಆರ್.ಎ. ಬಡಿಗೇರ ಮಾತನಾಡಿ, ‘ನಮಗೆ ತಿಂಗಳಿಗೆ ₹ 7500 ವೇತನ ನಿಗದಿಪಡಿಸಲಾಗಿದೆ. ವಾರ್ಷಿಕ ಒಮ್ಮೆ ಅಥವಾ ಎರಡು ಬಾರಿ ವೇತನ ಕೊಡಲಾಗುತ್ತಿದೆ. ವರ್ಷದಲ್ಲಿ 8 ತಿಂಗಳ ಮಾತ್ರ ವೇತನ ದೊರೆಯುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ಕಾಲೇಜಿನ ಅಭಿವೃದ್ಧಿಯಲ್ಲಿ ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮನ್ನು ಕಡೆಗಣಿಸಿದೆ’ ಎಂದು ದೂರಿದರು.
‘ಪ್ರೌಢಶಾಲೆಗಳ ಅಥಿತಿ ಉಪನ್ಯಾಸಕರಿಗೆ ₹ 8000 ವೇತನ ಕೊಡಲಾಗುತ್ತಿದೆ. ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ₹ 12ಸಾವಿರವನ್ನು 10 ತಿಂಗಳಿಗೆ ಪಡೆಯುತ್ತಿದ್ದಾರೆ. ಆದರೆ, ನಮಗೆ ತಾರತಮ್ಯ ಮಾಡಲಾಗುತ್ತಿದೆ. 13 ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ಈಗಲಾದರೂ ಅನ್ಯಾಯ ಸರಿಪಡಿಸಬೇಕು’ ಎಂದು ಕೋರಿದರು.