ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಬಿರುಸಿನ ಪ್ರಚಾರ ನಡೆಸಿದರು.
ಕಿಣಯೆ, ಹಿಂಡಲಗಾ, ಮನ್ನೂರ ಗ್ರಾಮಗಳಲ್ಲಿ ಮತ್ತು ನಗರದ ಕ್ಯಾಂಪ್ ಪ್ರದೇಶ, ಹನುಮಾನ ನಗರ, ಮಹಾಂತೇಶ ನಗರ, ಸರಸ್ವತಿ ನಗರಗಳಲ್ಲಿ ಮತ ಯಾಚಿಸಿದರು.
‘ಒಬ್ಬ ಸಮರ್ಥ ನಾಯಕನಿದ್ದರೆ ದೇಶವನ್ನು ಅದ್ಭುತವಾಗಿ ಕಟ್ಟಲು ಸಾಧ್ಯ ಎನ್ನುವುದು ಸಾಬೀತಾಗಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ. ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಆಗಿರುವ ಪ್ರಗತಿಯೇ ಇದಕ್ಕೆ ಸಾಕ್ಷಿಯಾಗಿದೆ’ ಎಂದರು.
‘ಗ್ರಾಮಗಳ ಅಭಿವೃದ್ಧಿಯೊಂದಿಗೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಕೇಂದ್ರ ಸರ್ಕಾರ ಅನುಪಮ ಕಾರ್ಯಗಳನ್ನು ಮಾಡಿದೆ. ಕೊರೊನಾ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಂಭಾವ್ಯ ಸಾವು–ನೋವುಗಳನ್ನು ತಪ್ಪಿಸಿದೆ. ಜಗತ್ತಿಗೆ ಭಾರತವು ಆರೋಗ್ಯ ಸೇವಾ ಕ್ಷೇತ್ರದಲ್ಲೂ ನಂ.1 ಎನ್ನುವುದನ್ನು ಸಾಬೀತುಪಡಿಸಿ ತೋರಿಸಿದೆ. ದೇಶದಲ್ಲಿ ಪತ್ತೆ ಹಚ್ಚಿದ ಲಸಿಕೆಗಳು ವಿದೇಶದ ಲಕ್ಷಾಂತರ ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದೆಲ್ಲವೂ ಸಾಧ್ಯವಾದುದು ಕೇಂದ್ರದ ಇಚ್ಛಾಶಕ್ತಿ ಪ್ರತಿಫಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ದಿನಗಳ ನಿರ್ಮಾಣಕ್ಕಾಗಿ ಕೇಂದ್ರ ದುಡಿದಿದೆ. ಇದನ್ನು ವಿರೋಧಪಕ್ಷಗಳು ಸೂಕ್ಷ್ಮವಾಗಿ ಅವಲೋಕಿಸಬೇಕು’ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಶಿವಾಜಿ ಸುಂಠಕರ, ಶಶಿಕಾಂತ ನಾಯಕ, ಶಶಿಕಾಂತ ಸಿದ್ನಾಳ ಇದ್ದರು.