ಬೆಳಗಾವಿ: ತಾಲ್ಲೂಕಿನ ಸುಕ್ಷೇತ್ರ ಸುಳೇಭಾವಿ ಗ್ರಾಮದಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಮಹಾಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಲಿಪಾಢ್ಯಮಿಯ ದಿನವಾದ ಮಂಗಳವಾರ ರಾತ್ರಿ ಸಂಪ್ರದಾಯದಂತೆ ದೇವಿಯನ್ನು ವಿಶ್ವಕರ್ಮರ (ತವರು) ಮನೆಗೆ ಅತ್ಯಂತ ಸಂಭ್ರಮ-ಸಡಗರದಿಂದ ಕಳುಹಿಸಲಾಯಿತು.
ದೇವಿಯನ್ನು ಬಣ್ಣಕ್ಕೆ ಕಳುಹಿಸುವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದಿಂದ ಲಕ್ಷ್ಮಿ ಗಲ್ಲಿವರೆಗೆ ಕರೆತರಲಾಯಿತು. ವಿಶ್ವಕರ್ಮರ ಮನೆಗೆ ತಂದು ಪ್ರತಿಷ್ಠಾಪಿಸಲಾಯಿತು.
ದೇವಸ್ಥಾನ ಟ್ರಸ್ಟ್ ಸಮಿತಿಯವರು, ಪೂಜಾರಿಗಳು, ದೇವಿ ಹಕ್ಕುದಾರರ ಸಮ್ಮುಖದಲ್ಲಿ ದೇವಿಯನ್ನು ತವರಿಗೆ ಕರೆತರಲಾಯಿತು. 2020ರ ಮಾರ್ಚ್ನಲ್ಲಿ ಜಾತ್ರೆ ನಡೆಯಲಿದೆ.
ಬೆಳಿಗ್ಗೆಯಿಂದಲೇ ಭಕ್ತರು ದೇವಿಗೆ ಉಡಿ ತುಂಬಿ ದರ್ಶನ ಪಡೆದರು. ಸಂಜೆ ಹಿರಿಯರು, ಪೂಜಾರಿಗಳಿಂದ ದೈವದ ಉಡಿ ತುಂಬಿದ ಬಳಿಕ ದೇವಿ ಬಣ್ಣಕ್ಕೆ ಕಳುಹಿಸುವ ವಿಧಾನ ಆರಂಭವಾಯಿತು. ಉಧೋ ಉಧೋ ಎಂಬ ಜಯ ಘೋಷಗಳು ಮೊಳಗಿದವು. ಯುವಕರು ಕುಣಿದು ಸಂಭ್ರಮಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದರು.
‘ಮುಂದಿನ ವರ್ಷ ಮಾರ್ಚ್ 10ರಿಂದ 9 ದಿನಗಳವರೆಗೆ ನಡೆಯಲಿರುವ ಜಾತ್ರೆಗೆ ಮುನ್ನವೇ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಹೆಬ್ಬಾಳಕರ ತಿಳಿಸಿದರು.