ಬೆಳಗಾವಿ: ‘ಶಾಸಕಿ ಸೌಮ್ಯಾ ರೆಡ್ಡಿ ಮೇಲೆ ರಾಜಕೀಯ ದುರುದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಕೂಡಲೇ ಪ್ರಕರಣ ಹಿಂಪಡೆಯದಿದ್ದರೆ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಎಚ್ಚರಿಕೆ ನೀಡಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಹಕ್ಕಿಗಾಗಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಪೊಲೀಸರು ಎಳೆದಾಡಿದ್ದಾರೆ. ಆದರೆ, ಅದನ್ನು ಮರೆಮಾಚಿ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸರು ಶಾಸಕಿ ವಿರುದ್ಧವೇ ಪ್ರಕರಣ ದಾಖಲಿದ್ದಾರೆ. ಇದರ ಹಿಂದೆ ಬಿಜೆಪಿ ಸರ್ಕಾರದ ಕೈವಾಡವಿದೆ. ಬಿಜೆಪಿ ಸೇಡಿನ ರಾಜಕಾರಣ ಮುಂದುವರಿಸಿದೆ’ ಎಂದು ಆರೋಪಿಸಿದರು.
‘ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಆಂತರಿಕ ಕಲಹವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇದರ ನಡುವೆ ನ್ಯಾಯಯುತ ಹೋರಾಟಕ್ಕಿಳಿದ ಮತ್ತು ರೈತರ ಪರ ಧ್ವನಿ ಎತ್ತಿದ ಶಾಸಕಿ ಗುರಿಯಾಗಿಸಿಕೊಂಡು ಎಫ್ಐಆರ್ ದಾಖಲಿಸಿರುವುದು ಸರಿಯಿಲ್ಲ’ ಎಂದರು.
ಪದಾಧಿಕಾರಿಗಳಾದ ಬಿ.ಎನ್. ನಾಡಗೌಡ, ರಾಮಣ್ಣ ಅರಕೇರಿ, ರಾಜೇಂದ್ರ ಪಾಟೀಲ, ನಾರಾಯಣ ಕೆಂಚರೆಡ್ಡಿ, ಜಿ.ಬಿ. ಮೇಲಪ್ಪಗೋಳ, ಎಸ್.ಎ. ಅರಕೇರಿ ಇದ್ದರು.