ಬೆಳಗಾವಿ: ‘ಶಾಸ್ತ್ರ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎರಡೂ ಒಂದೇ. ಶಾಸ್ತ್ರ ಸಾಹಿತ್ಯ ಕಠಿಣ. ದಾಸ ಸಾಹಿತ್ಯ ಬೆಳದಿಂಗಳಂತೆ ಸಾಮಾನ್ಯ ಮನುಷ್ಯನಿಗೂ ಅಹ್ಲಾದಕರ ಆನಂದ ನೀಡುವಂತಹದ್ದು’ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಇಲ್ಲಿನ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಎರಡನೇ ದಿನದ ಹರಿದಾಸ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಜೀವಿನಿ ಗುಡ್ಡವನ್ನು ಹನುಮಂತ ತನ್ನ ಎಡಗೈಯಲ್ಲಿ ತಂದಿದ್ದು ಶಕ್ತಿಯ ಸಂಕೇತವಾಗಿದೆ. ರಾಮನ ಪೂಜೆಗಾಗಿ ಎರಡೂ ಕೈಗಳಿಂದ ಹೂವುಗಳನ್ನು ತಂದಿದ್ದು ಭಕ್ತಿಯ ಸಂಕೇತವಾಗಿದೆ. ಹನುಮಂತನಲ್ಲಿರುವ ಶಕ್ತಿ ಮತ್ತು ಭಕ್ತಿಯನ್ನು ಇಂದಿನ ಯುವಪೀಳಿಗೆ ಅನುಸರಿಸಬೇಕು’ ಎಂದರು.
ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನತೀರ್ಥ ಮಾತನಾಡಿ, ‘ಬದುಕಿನಲ್ಲಿ ಹೇಗಿರಬೇಕೆಂಬುದಕ್ಕೆ ರಾಮ ಮಾದರಿಯಾದರೆ, ಹೇಗಿರಬಾರದೆಂಬುದಕ್ಕೆ ರಾವಣ ಮಾದರಿಯಾಗಿದ್ದಾನೆ. ಹನುಮಂತ ನಿಸ್ವಾರ್ಥ ಸೇವೆಗೆ ಮಾದರಿಯಾಗಿದ್ದಾನೆ. ಬದುಕಿನ ಎಲ್ಲ ಪಾತ್ರಗಳು ರಾಮಾಯಣದಲ್ಲಿ ಅಡಕವಾಗಿವೆ’ ಎಂದು ಹೇಳಿದರು.
ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿದರು. ಗಾಯಕ ಡಾ.ಪ್ರಸನ್ನ ಗುಡಿ ಇವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಡಾ. ರಾಯಚೂರು ಶೇಷಗಿರಿದಾಸ ಸ್ವಾಗತಿಸಿದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.
ಹರಿದಾಸ ಸೇವಾ ಸಮಿತಿಯ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯಿ, ಶ್ರೀಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ, ಅಶೋಕ ದೇಸಾಯಿ, ಇತರರು ಭಾಗವಹಿಸಿದ್ದರು.