ಅಥಣಿ: ‘ಕೃಷಿ ಇಲಾಖೆ ಅಧಿಕಾರಿಗಳು ನಮ್ಮ ಮಳಿಗೆಗಳ ಮೇಲೆ ದಾಳಿ ನಡೆಸಿ, ಪಾಲಿಸಲಾಗದ ನಿಯಮಗಳನ್ನೆಲ್ಲಾ ಹೇಳುತ್ತಿದ್ದಾರೆ. ಇದರಿಂದ ತೊಂದರೆ ಆಗುತ್ತಿದೆ. ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸದಿದ್ದರೆ ಅಂಗಡಿಗಳನ್ನು ಮುಚ್ಚಿ ಹೋರಾಟ ಮಾಡಬೇಕಾಗುತ್ತದೆ’ ಎಂದು ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
‘ಹಲವಾರು ವರ್ಷಗಳಿಂದ ಕೃಷಿ ಪರಿಕರಗಳನ್ನು ಮಾರುತ್ತಿದ್ದೇವೆ. ಆದರೆ, ಈ ಬಾರಿ ಬಹಳ ತೊಂದರೆ ಅನುಭವಿಸುತ್ತಿದ್ದೇವೆ. ಪ್ರಧಾನಿ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದ್ದರೆ, ಇಲ್ಲಿನ ಅಧಿಕಾರಿಗಳು ರೈತರಿಗೆ ಕಂಪ್ಯೂಟರ್ ಬಿಲ್ ಕೊಡಬೇಡಿ ಕೈಯಿಂದ ಬರೆದ ಬಿಲ್ ಕೊಡಿ ಎನ್ನುತ್ತಿದ್ದಾರೆ. ಇದಕ್ಕೆ ಬಹಳ ಸಮಯ ಬೇಕಾಗುತ್ತದೆ’ ಎಂದು ಕೃಷಿ ಪರಿಕರ ಮಾರಾಟಗಾರ ಶಿವರಾಜ ಪಾಟೀಲ ತಿಳಿಸಿದರು.
ಅಧ್ಯಕ್ಷ ಶಿವಯೋಗಿ ಗೆಜ್ಜಿ ಮಾತನಾಡಿ, ‘ಕೆಲವೊಂದು ಕಂಪನಿಗಳ ಔಷಧಿಗಳನ್ನು ಮಾರಿದರೆ ನಮ್ಮ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಆದರೆ, ಆ ಕಂಪನಿಗಳ ಔಷಧಿಗಳನ್ನು ತಯಾರಿಸುವ ಕಂಪನಿಗೆ ಸರ್ಕಾರದವರೆ ಪರವಾನಗಿ ನೀಡಿರುತ್ತಾರೆ. ಸರ್ಕಾರ ಅಂತಹ ಕಂಪನಿಗಳಿಗೆ ಪರವಾನಗಿ ರದ್ದುಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ. ಸರ್ಕಾರದ ತಪ್ಪಿಗೆ ನಮ್ಮನ್ನು ಹೊಣೆ ಮಾಡುವುದು ಸರಿಯೇ?’ ಎಂದು ಕೇಳಿದರು.
‘ದರದ ಬೋರ್ಡ್ ಹಾಕಬೇಕು ಎನ್ನುತ್ತಾರೆ. ನೂರಾರು ಕಂಪನಿಗಳ ಔಷಧಿಗಳು ಮೊದಲಾದ ಪರಿಕರಗಳು ನಮ್ಮಲ್ಲಿ ಇರುತ್ತವೆ. ಅವುಗಳ ದರವನ್ನೆಲ್ಲವನ್ನೂ ಹೇಗೆ ಹಾಕಲು ಸಾಧ್ಯ’ ಎಂದು ಆನಂದ ಕುಂಬಾರ ಪ್ರಶ್ನಿಸಿದರು.
ಸಂಘದ ಶಂಕರ ಬಳವಾಡ, ನರಸು ಬಡಕಂಬಿ, ಜಡೆಪ್ಪ ಕುಂಬಾರ, ಬಸವರಾಜ ಪಾಟೀಲ, ಪ್ರಕಾಶ ಭೋಸಲೆ, ಅಶೋಕ ಶಿರಗುಪ್ಪಿ, ಮುಖೇಶ ಭೋಸಲೆ, ಉಮೇಶ ಹನಗಂಡಿ, ರವಿ ಮಾಳಿ ಇದ್ದರು.