ಆಥಣಿ: ತಾಲ್ಲೂಕಿನ ಹೊಸಟ್ಟಿ ಗ್ರಾಮದ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು, ರೈತ ಸಂಘದ ಮುಖಂಡರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ‘ಗ್ರಾಮವನ್ನು ಸಂಪರ್ಕಿಸುವ ರಸ್ತೆ ಬಹಳ ಹಾಳಾಗಿದೆ. ಇದರಿಂದಾಗಿ ನಮಗೆ ಬಹಳ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಗ್ರಾಮದ ಯುವಕ ಶಶಿಧರ ಬರ್ಲಿ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಮಹಾದೇವ ಬರ್ಲಿ, ಮಹಾಂತೇಶ ನಾಯಿಕ, ರಾಜು ಬರ್ಲಿ, ಶಂಕರ ಕೋಳಿಗುಡ್ಡ, ಸಚಿನ ಸೌದಾಗರ, ಶ್ರೀಶೈಲ ನಾಯಿಕ, ಸಂತೋಷ ಪವಾರ, ಚಂದ್ರಶೇಖರ ರೋಕಡಿ, ಮಹೇಶ ಘಾಟಗಿ, ಪ್ರಶಾಂತ ಪೋಳ ಭಾಗವಹಿಸಿದ್ದರು.
ಹೊಸಟ್ಟಿ ಗ್ರಾಮ ಸೌಲಭ್ಯಗಳಿಲ್ಲದೆ ಬಳಲುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಸೋಮವಾರ ವರದಿ ಪ್ರಕಟವಾಗಿತ್ತು.