ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹ 3,500 ದರ ನೀಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ ಸಂಘಟನೆಯ ನೇತೃತ್ವದಲ್ಲಿ ಕಬ್ಬು ಬೆಳಗಾರರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆಚರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
‘ಅತಿವೃಷ್ಟಿಯಿಂದ ಕಬ್ಬಿನ ಬೆಳೆ ಹಾಳಾಗಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಯೋಗ್ಯ ದರ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಧ್ಯೆಪ್ರವೇಶಿಸಿ, ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಬೇಕು’ ಎಂದು ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಒತ್ತಾಯಿಸಿದರು.
‘ಈಗಾಗಲೇ ಮಹಾರಾಷ್ಟ್ರ ₹ 3,500, ಗುಜರಾತದಲ್ಲಿ ₹ 4,500 ದರ ನೀಡಲಾಗುತ್ತಿದೆ. ಅದೇ ರೀತಿ ತಮಿಳುನಾಡು, ಹರಿಯಾಣ ರಾಜ್ಯದ ಸಕ್ಕರೆ ಕಾರ್ಖಾನೆಗಳು ಬೆಲೆ ನಿಗದಿ ಮಾಡಿವೆ.ಕರ್ನಾಟಕದಲ್ಲಿಯು ದರ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ರವಾನಿಸಿದರು. ಮಹಾದೇವ ದಾಣನ್ನವರ, ಗುರುಗೌಡ ಪಾಟೀಲ, ವಿ.ಜಿ. ಶಿನನ್ನವರ, ನಾರಾಯಣ ಪಾಟೀಲ, ಬಿ.ಎಸ್ ಚುಳಕಿ, ಎಸ್.ಬಿ ಕಾಕತಕರ, ಟಿ.ಎ ಪಾಟೀಲ,ಅಕೀಲಾ ಪಠಾಣ ಕಾರ್ಯಕರ್ತರು ಇದ್ದರು.