ಬೆಳಗಾವಿ: ‘ಜಗದೀಶ ಶೆಟ್ಟರ್ ಅವರ ತಂದೆ ಮೂರುಸಾವಿರ ಮಠದ ಭಕ್ತರು. ಅವರು ಬೆಳಗಾವಿಗೆ ಬಂದ ಮೇಲೆ ಮಠಕ್ಕೆ ಬಂದಿರಲ್ಲಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಲು ಬಂದಿದ್ದೇವೆ’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಸಂಸದೆ ಮಂಗಲಾ ಅಂಗಡಿ ಅವರ ನಿವಾಸಕ್ಕೆ ಶನಿವಾರ ಆಗಮಿಸಿ, ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಜಗದೀಶ ಶೆಟ್ಟರ್ ಕುಟುಂಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಶೆಟ್ಟರ್ ಅವರನ್ನು ಭೇಟಿಯಾಗಿ ಆಶೀರ್ವಾದ ಮಾಡಲು ಬಂದಿದ್ದೇನೆ. ಅವರಿಗೆ ಈ ಚುನಾವಣೆಯಲ್ಲಿ ಒಳ್ಳೆಯದಾಗುತ್ತದೆ’ ಎಂದರು.
ಬೈಲಹೊಂಗಲದ ಮೂರುಸಾವಿರ ಶಾಖಾ ಮಠದ ಸ್ವಾಮೀಜಿ, ಕೊರ್ತಿ ಕೋಲಾರದ ಗಾಣಿಗ ಸಮಾಜದ ಸ್ವಾಮೀಜಿ, ಅರಳಿಕಟ್ಟಿ ವಿರಕ್ತಮಠದ ಸ್ವಾಮೀಜಿ, ಘಟಪ್ರಭಾ ಹೊಸಮಠದ ಶ್ರೀಗಳು, ಬೀದರ್ ವೀರಕ್ತಮಠದ ಸ್ವಾಮೀಜಿ, ತಾರಿಹಾಳ ಅಡಿವೇಶ ಮಠದ ಸ್ವಾಮೀಜಿ, ಗೌಡಗೇರಿ ವಿರಕ್ತ ಮಠದ ಶ್ರೀಗಳು ಇದ್ದರು.