ಬೆಳಗಾವಿ: ‘ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಪ್ರತಿಮ ಹೋರಾಟಗಾರ. ತನ್ನ ಕೊನೆ ಉಸಿರು ಇರುವವರೆಗೂ ನಾಡು ಮತ್ತು ದೇಶಕ್ಕಾಗಿ ಹೋರಾಡಿದರು. ಅದು ಇಂದಿನ ಪೀಳಿಗೆಯವರಿಗೆ ಮಾದರಿಯಾಗಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಶಿಸಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಟಿಪ್ಪು ಫೋಟೊಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಮಡಿಕೇರಿ ದಂಗೆಯಲ್ಲಿ 70ಸಾವಿರ ಸೈನಿಕರನ್ನು ಟಿಪ್ಪು ಕೊಂದ ಎಂದು ಹೇಳುವ ಮೂಲಕ ಬಿಜೆಪಿಗರು ಇತಿಹಾಸವನ್ನು ತಿರುಚುತ್ತಿದ್ದಾರೆ. ಆ ಸಮಯದಲ್ಲಿ 70ಸಾವಿರ ಸೈನಿಕರು ಇರಲೇ ಇಲ್ಲ. ಬಿಜೆಪಿ ಹಾಗೂ ಆರ್ಎಸ್ಎಸ್ನವರು ಇತಿಹಾಸ ತಿಳಿದು ಮಾತನಾಡಬೇಕು’ ಎಂದು ತಿರುಗೇಟು ನೀಡಿದರು.
‘ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಹಿಂದೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಗುಣಗಾನ ಮಾಡಿದ್ದರು. ಆದರೆ, ಇಂದು ರಾಜಕೀಯಕ್ಕಾಗಿ ಟಿಪ್ಪುವಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಟಿಪ್ಪು ಜಾತ್ಯತೀತವಾದಿ ಆಗಿದ್ದರು. ಅವರ ಸೇನೆಯಲ್ಲಿ ಎಲ್ಲ ಜಾತಿ, ಧರ್ಮದವರೂ ಇದ್ದರು. ಕನ್ನಡ ಭಾಷೆಯ ಬಗ್ಗೆಯೂ ಅವರಿಗೆ ಅಪಾರ ಅಭಿಮಾನವಿತ್ತು. ಅವರು ಒಂದೇ ಜಾತಿ, ಸಮುದಾಯಕ್ಕೆ ಸೀಮಿತವಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಆಸ್ಪತ್ರೆಗೆ ದಿಢೀರ್ ಭೇಟಿ:ಶಾಸಕ ಸತೀಶ ಜಾರಕಿಹೊಳಿ ನಗರದ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಿಬ್ಬಂದಿ ಹಾಗೂ ರೋಗಿಗಳಿಂದ ಮಾಹಿತಿ ಪಡೆದರು.
ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವಂತೆ ತಿಳಿಸಿದರು.