ಮಾನವನು ತನ್ನ ಜೀವನದಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವುದರೊಂದಿಗೆ, ಬಹಿರಂಗದ ದುಃಖವನ್ನು ದೂರ ಮಾಡುತ್ತದೆ. ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಿಸುತ್ತಿರಬೇಕು. ಈ ನಿಟ್ಟಿನಲ್ಲಿ ಬಸವಣ್ಣ ಅವರು ತಮ್ಮ ವಚನದ ಮೂಲಕ ಮಾನವನನ್ನು ಮೊಲಕ್ಕೆ ಹೋಲಿಸಿದ್ದಾರೆ. ಒಂಬತ್ತು ನಾಯಿಗಳು ಮೊಲಕ್ಕೆ ಬೆನ್ನು ಹತ್ತುವಂತೆ ಮಾನವನಿಗೂ ಪಂಚೇಂದ್ರಿಯಗಳು ಹಾಗೂ ಅಂತಃಕರಣ ಚತುಷ್ಟಯಗಳೆಂಬ ಒಂಬತ್ತು ನಾಯಿಗಳು ಬೆನ್ನು ಹತ್ತಿವೆ. ಪಂಚೇಂದ್ರಿಯಗಳ ಕುರಿತು ಎಲ್ಲರಿಗೂ ತಿಳಿದಿದೆ. ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಇವು ಅಂತಃಕರಣ ಚತುಷ್ಟಯಗಳು. ಪಂಚೇಂದ್ರಿಯಗಳು ದೇಹಕ್ಕೆ ಸಂಬಂಧಪಟ್ಟರೆ, ಚತುಷ್ಟಯಗಳು ಮನಸ್ಸಿಗೆ ಸಂಬಂಧಿಸಿದವಾಗಿವೆ. ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಭಗವಂತನ ಆರಾಧನೆ ಮಾಡುವುದು ಅವಶ್ಯ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.