ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇ ಪೂಜಿಸೋಣ, ಅವಲಂಬನೆ ಬೇಡ

Last Updated 7 ಜುಲೈ 2021, 9:43 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?

ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ,

ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ?

ಈ ಜಗತ್ತಿನಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ತಮ್ಮ ಅಗತ್ಯತೆಗಳನ್ನು ತಾವೆ ಪೂರೈಸಿಕೊಳ್ಳುತ್ತಾರೆ. ಆದರೆ, ದೈವದ ಅಥವಾ ಭಗವಂತನ ವಿಷಯ ಬಂದಾಗ ಬೇರೆಯವರ ಸಹಾಯ ತೆಗೆದುಕೊಂಡು ಪೂಜೆ ಮಾಡಿಸುವುದು ಸೂಕ್ತವಲ್ಲ ಎನ್ನುವುದನ್ನು ಬಸವಣ್ಣನವರು ಉದಾಹರಣೆಗಳ ಮುಖಾಂತರ ಈ ವಚನದಲ್ಲಿ ವಿವರಿಸಿದ್ದಾರೆ.

ತನ್ನ ಸಂಸಾರವನ್ನು ತಾನೆ ಮಾಡಬೇಕಲ್ಲದೆ ಬೇರೆಯವರು ಮಾಡಲಾಗುವುದಿಲ್ಲ. ತನ್ನ ಹಸಿವನ್ನು ತಾನೆ ಹೇಗೆ ನೀಗಿಸಿಕೊಳ್ಳಬೇಕೋ ಹಾಗೆಯೇ ಆರೋಗ್ಯದ ಸಮಸ್ಯೆ ಬಂದಾಗ ತಾನೆ ಔಷಧೋಪಚಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದೇ ತೆರನಾಗಿ ಪೂಜಾದಿ ಕ್ರಿಯೆಗಳನ್ನು ತಾನೆ ಮಾಡಿದರೆ ಫಲಾದಿಗಳು ತನಗೆ ದೊರಕುತ್ತವೆ. ಪೂಜಾದಿಗಳನ್ನು ಬೆರೆಯವರಿಂದ ಮಾಡಿಸಿದರೆ ಯಾವುದೇ ಪ್ರಯೋಜನವಿಲ್ಲ. ಪೂಜೆ ಮಾಡಿದವರಿಗೆ ಅದರ ಫಲ ದೊರೆಯುತ್ತದೆಯೇ ಹೊರತು ಮಾಡಿಸಿದವರಿಗೆ ಸಿಗುವುದಿಲ್ಲ. ನಮಗಾದ ರೋಗ–ರುಜಿನಗಳಿಗೆ ಹೇಗೆ ನಾವೇ ಜವಾಬ್ದಾರರು ಆಗುತ್ತೇವೆಯೋ ಹಾಗೆಯೇ ಭಗವಂತನ ಆರಾಧನೆಯನ್ನು ನಾವು ಮಾಡಿದರೆ ಫಲ ನಮಗೆ ದೊರೆಯುತ್ತದೆಎನ್ನುವುದು ಈ ವಚನದ ಸಾರವಾಗಿದೆ. ದೇವರನ್ನು ನಾವೇ ಪೂಜಿಸೋಣ; ಅವಲಂಬನೆ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT