ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಗುರುವಾರ ‘ವಟ ಸಾವಿತ್ರಿ ವ್ರತ’ವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.
ಪತಿ ಸತ್ಯವಾನ್ನನ್ನು ಉಳಿಸಿಕೊಳ್ಳಲು ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಹುಣ್ಣಿಮೆಯಂದು ವಟ ಸಾವಿತ್ರಿ ವ್ರತವನ್ನು ಆಚರಿಸುವ ಸಂಪ್ರದಾಯ ಈ ಭಾಗದಲ್ಲಿದೆ.
ತಮ್ಮ ಮನೆಗಳ ಸಮೀಪದಲ್ಲಿರುವ ದೇವಸ್ಥಾನಗಳ ಆವರಣದಲ್ಲಿರುವ ಆಲದ ಮರಕ್ಕೆ ಮಹಿಳೆಯರು ನಮಿಸಿದರು. ಪತಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಪ್ರಾರ್ಥಿಸಿದರು. ಕೊರೊನಾ ಸೋಂಕಿನ ಭೀತಿಯಿಂದಾಗಿ ದೇವಸ್ಥಾನಗಳಲ್ಲಿ ಪೂಜೆಗೆ ಅವಕಾಶ ಇರಲಿಲ್ಲ. ಹೀಗಾಗಿ, ಆಲದ ಮರದ ಆವರಣದಲ್ಲೇ ಪೂಜಿ ಸಲ್ಲಿಸುತ್ತಿದ್ದುದು ಕಂಡುಬಂತು. ಮರಕ್ಕೆ ನೂಲು ಸುತ್ತುವಾಗ ಬಹುತೇಕರು ಅಂತರ ಮರೆತರು. ಕೆಲವರು ಮುಖಗವಸು ಕೂಡ ಧರಿಸಿರಲಿಲ್ಲ.
ರಾಣಿ ಚನ್ನಮ್ಮ ವೃತ್ತದ ಗಣೇಶ ಮಂದಿರ,ಶಾಹೂನಗರದ ಶಿವಾಲಯ, ಕಪಿಲೇಶ್ವರ ಮಂದಿರ ಆವರಣ ಮೊದಲಾದ ಕಡೆಗಳಲ್ಲಿ ಮಹಿಳೆಯರು ಆಲದ ಮರಕ್ಕೆ ಭಕ್ತಿ ಭಾವದಿಂದ ನೂಲನ್ನು ಸುತ್ತುತ್ತಾ ಪ್ರದಕ್ಷಿಣೆ ಹಾಕುವ ಮೂಲಕ ಪೂಜೆ ಸಲ್ಲಿಸಿದರು. ಕೊರೊನಾ ಭೀತಿಯಿಂದಾಗಿ ಈ ಬಾರಿ ಮಹಿಳೆಯರು ಸಂಖ್ಯೆ ಕಡಿಮೆ ಇತ್ತು.
ಕೆಲವರು ತಮ್ಮ ಮನೆಗಳ ಆವರಣದಲ್ಲೇ ಆಲದ ಸಸಿಗೆ ಪೂಜೆ ಸಲ್ಲಿಸಿ, ಮುತ್ತೈದೆಯರಿಗೆ ಅರಿಸಿನ–ಕುಂಕುಮ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.