ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಿರಿಯ ರಾಜಕಾರಣಿ, ನಟ ಅಂಬರೀಷ್ ಅವರನ್ನು ಶನಿವಾರ ತಡ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದರು.
‘ಕಾಂಗ್ರೆಸ್ನೊಂದಿಗೆ ಮುನಿಸಿಕೊಂಡಿರುವ ಅಂಬರೀಷ್ ಅವರನ್ನು ಪಕ್ಷದತ್ತ ಸೆಳೆಯಲು ಕುಮಾರಸ್ವಾಮಿ ಭೇಟಿಯಾಗಿದ್ದರು. ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ವ್ಯಕ್ತಪಡಿಸುವ ಒಲವು ತೋರಿದ್ದಾರೆ’ ಎಂದು ಜೆಡಿಎಸ್ ವಕ್ತಾರ ಟಿ.ಎ.ಶರವಣ ತಿಳಿಸಿದರು.
‘ಮಂಡ್ಯ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಚುನಾವಣೆಗೆ ಮೊದಲೇ ತಮ್ಮ ತೀರ್ಮಾನವನ್ನು ಪ್ರಕಟಿಸುವುದಾಗಿ ಕುಮಾರಸ್ವಾಮಿಗೆ ಅಂಬರೀಷ್ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.
‘ಮಂಡ್ಯ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ನ್ಯಾಯ ಒದಗಿಸಲು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಅಂಬರೀಷ್ ಅವರು ಜೆಡಿಎಸ್ ಪರವಾಗಿ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ’ ಎಂದರು.
‘ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಒಂದು ಮಾತು ಹೇಳದೇ ಸಿದ್ದರಾಮಯ್ಯ ಮಂತ್ರಿ ಸ್ಥಾನದಿಂದ ತೆಗೆದು ಹಾಕಿದರು. ಬಿ ಫಾರಂ ಕಳಿಸುವಾಗ ಮಾತ್ರ ನನ್ನ ಆರೋಗ್ಯ ಸರಿ ಇತ್ತೆ. ಇವರಿಂದ ಸಾಕಷ್ಟು ಅವಮಾನವಾಗಿದೆ. ಬುದ್ಧಿ ಕಲಿಸುತ್ತೇನೆ ಎಂಬ ಅಸಮಾಧಾನ ತೋಡಿಕೊಂಡರು’ ಎಂದು ಶರವಣ ಹೇಳಿದರು.