ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಟೀಕಿಸಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆ’

Published 27 ಮಾರ್ಚ್ 2024, 16:03 IST
Last Updated 27 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಧಾನಿ ಮೋದಿ ಅವರನ್ನು ಟೀಕಿಸಿದರೆ, ತಾವು ದೊಡ್ಡ ನಾಯಕರಾಗುತ್ತೇವೆ ಎಂಬ ಭ್ರಮೆ ಸಿದ್ದರಾಮಯ್ಯ ಅವರಿಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಮುಖ್ಯಮಂತ್ರಿಯಾಗಿ ಅವರೇ ಯೋಚಿಸಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಮೊದಲ ಸಲ ನಗರಕ್ಕೆ ಬಂದ ಹಿನ್ನೆಲೆಯಲ್ಲಿ ನಡೆದ ಬೈಕ್‌ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ಅವರ ಬಗ್ಗೆ ಅನಗತ್ಯ ಟೀಕೆ ಮಾಡುವ ಮುಖ್ಯಮಂತ್ರಿಯವರ  ಮಾತಿಗೆ ನಗಬೇಕೋ, ಅಳಬೇಕೋ ಗೊತ್ತಾಗುವುದಿಲ್ಲ. ಇಂತಹ ಮಾತು ಕಡಿಮೆ ಮಾಡಿ, ನಿಮ್ಮ ಸಿ.ಎಂ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಿ’ ಎಂದರು.

‘ಮೋದಿ ಹೆಸರು ಹೇಳಿ ಮತ ಕೇಳಿದರೆ ಕಪಾಳಮೋಕ್ಷ ಮಾಡಿ’ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಶಿವರಾಜ್ ತಂಗಡಗಿ ಅಥವಾ ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ. ಅತಿರೇಕದ ಪರಮಾವಧಿ. ಹಗುರವಾಗಿ ಮಾತನಾಡಿದವರ ಮೇಲೆ ಆ ಪಕ್ಷವೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬೈಕ್‌ನಲ್ಲಿ ಹಿಂಬಾಲಿಸಿದ ಸಂಸದೆ

ಸಂಸದೆ ಮಂಗಲಾ ಅಂಗಡಿ ಕೂಡ ಜಗದೀಶ ಶೆಟ್ಟರ್‌ ಅವರ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡರು. ಆದರೆ, ತೆರೆದ ವಾಹನದಲ್ಲಿ ಅವರನ್ನು ವಾಹನ ಹತ್ತಿಸಿಕೊಳ್ಳಲಿಲ್ಲ. ಅವರು ಕಾರ್ಯಕರ್ತೆಯೊಬ್ಬರ ದ್ವಿಚಕ್ರ ವಾಹನದಲ್ಲಿ ಕೂತು, ರ‍್ಯಾಲಿಯಲ್ಲಿ ಭಾಗಿಯಾದರು. ತೀವ್ರ ಬಿಸಿಲಿನಲ್ಲೂ ಅವರು ಮೂರು ಕಿ.ಮೀ ದ್ವಿಚಕ್ರ ವಾಹನದಲ್ಲೇ ಸಾಗಿದರು. ಶೆಟ್ಟರ್ ಅವರಿಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಅಭಯ ಪಾಟೀಲ ಕೂಡ ಬೈಕ್‌ನಲ್ಲಿ ಸಾಗಿದರು

ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ನಡೆಸಿದ ಚುನಾವಣಾ ರ್‍ಯಾಲಿ ವೇಳೆ ಸಂಸದೆ ಮಂಗಲಾ ಅಂಗಡಿ ಅವರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದರು – ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ನಡೆಸಿದ ಚುನಾವಣಾ ರ್‍ಯಾಲಿ ವೇಳೆ ಸಂಸದೆ ಮಂಗಲಾ ಅಂಗಡಿ ಅವರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದರು – ಪ್ರಜಾವಾಣಿ ಚಿತ್ರ

‘ಬೆಳಗಾವಿ ನನ್ನ ಕರ್ಮಭೂಮಿ’

ಬೆಳಗಾವಿ: ‘ಬೆಳಗಾವಿ ನನ್ನ ಕರ್ಮಭೂಮಿ. ಇಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಇಲ್ಲಿಯೇ ಇರುತ್ತೇನೆ. ನಾನು ಹೊರಗಿನವ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು. ಬೈಕ್‌ ರ್‍ಯಾಲಿಯಲ್ಲಿ ಮಾತನಾಡಿದ ಅವರು ‘ನಾನು ಮುಖ್ಯಮಂತ್ರಿ  ಆಗಿದ್ದ ವೇಳೆ ಇಲ್ಲಿನ ಸುವರ್ಣ ವಿಧಾನಸೌಧ ಉದ್ಘಾಟಿಸಿರುವೆ. ಎರಡು ಸಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿ ಮಾಡಿರುವೆ. ನೀರಾವರಿಗಾಗಿ ಹೋರಾಡಿರುವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ವಿರೋಧ ಪಕ್ಷದ ನಾಯಕನಾಗಿ ಪ್ರತಿ ಹಂತದಲ್ಲೂ ಈ ಜಿಲ್ಲೆಗಾಗಿ ದುಡಿದ್ದೇನೆ. ನನ್ನ ಹಾಗೂ ಬೆಳಗಾವಿ ಸಂಬಂಧ 30 ವರ್ಷಕ್ಕೂ ಹಿಂದಿನದ್ದು. ನಾನು ಹೊರಗಿನವನಲ್ಲ. ನಿಮ್ಮವನೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT