ಈಗಾಗಲೇ ಇದರ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಆಲುಗಡ್ಡೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಮಾವು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಉತ್ಪನ್ನಗಳನ್ನು ಬೆಳೆಯುವ ರೈತರು ಬೀದಿಗೆ ಬೀಳಲಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಈ ಆದೇಶವನ್ನು ವಾಪಸ್ ಪಡೆದು ರೈತರಿಗೆ ಅನುಕೂಲ ಆಗುವಂತೆ ಎಪಿಎಂಸಿ ಕಾಯ್ದೆಯನ್ನು ಸಬಲಗೊಳಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
‘ಹಳೆಯ ಕಾಯ್ದೆಯಿಂದಾಗಿ ರೈತರು ಉಚಿತವಾಗಿ ಎಪಿಎಂಸಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶ ಇತ್ತು. ಇಲಾಖೆಯಿಂದಲೇ ತೂಕ ಮಾಡಿಸಲಾಗುತ್ತಿತ್ತು. ಆದರೆ, ಹೊಸ ಆದೇಶದಿಂದಾಗಿ ರೈತರು ಬೀದಿ ಮೇಲೆ ಕುಳಿತು ಉತ್ಪನ್ನ ಮಾರಬೇಕಾದ ಸ್ಥಿತಿ ಬರಲಿದೆ. ಈ ಉತ್ಪನ್ನಗಳ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ, ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಿ ಅಗತ್ಯ ನೀತಿಯನ್ನು ಸರ್ಕಾರ ರೂಪಿಸಿದ ಬಳಿಕ ಈ ಆದೇಶವನ್ನು ಹೊರಡಿಸಬೇಕಿತ್ತು.