ಹೊಸಪೇಟೆ: ಇಲ್ಲಿನ ಭಟ್ರಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ ಗುರುವಾರ ಸಂಜೆ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿತು.
ಹೊಸ ತೇರಿಗೆ ಪೂಜೆ ಸಲ್ಲಿಸಿದ ನಂತರ ಭಕ್ತರು ಮಡಿತೇರು ಎಳೆದರು. ಮಂತ್ರಘೋಷ, ಪಟಾಕಿ ಸದ್ದು, ಜಯಘೋಷಗಳ ನಡುವೆ ದೇವಸ್ಥಾನದಿಂದ ಮುಖ್ಯರಸ್ತೆಯ ವರೆಗೆ ತೇರೆ ಎಳೆದು ಭಕ್ತರು ಹರಕೆ ತೀರಿಸಿದರು. ಈ ವೇಳೆ ಬಾಳೆಹಣ್ಣು, ಉತ್ತತ್ತಿ ಎಸೆದರು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕ ಆನಂದ್ ಸಿಂಗ್ ಪತ್ನಿ ಲಕ್ಷ್ಮಿ ಸಿಂಗ್ ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನದಾಸೋಹ ನಡೆಯಿತು. ವಿವಿಧ ಕಡೆಗಳಿಂದ ನೂರಾರು ಜನ ಬಂದು ಆಂಜನೇಯನ ದರ್ಶನ ಪಡೆದರು. ದೇವಸ್ಥಾನ ಹಾಗೂ ಸುತ್ತಲಿನ ಪರಿಸರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.