ಪಾಪಿನಾಯಕನಹಳ್ಳಿ (ಹೊಸಪೇಟೆ ತಾಲ್ಲೂಕು): ‘ಇನ್ನೂ ಎರಡೂವರೆ ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸರ್ಕಾರ ನಡೆಸ್ತಾರೆ’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.
ಗುರುವಾರ ಸಂಜೆ ಇಲ್ಲಿ ಏರ್ಪಡಿಸಿದ್ದ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎರಡೂವರೆ ವರ್ಷದ ನಂತರವೂ ಯಡಿಯೂರಪ್ಪ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಪುನಃ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.
‘ಯಡಿಯೂರಪ್ಪನವರು ಹೋರಾಟದ ಮೂಲಕ ಬೆಳೆದಿದ್ದಾರೆ. ಆರುವರೆ ಕೋಟಿ ಜನರಿಗೆ ಅವರ ಮೇಲೆ ಸಂಪೂರ್ಣ ಭರವಸೆ ಇದೆ. ಅಮಿತ್ ಷಾ ಅವರು ಬಿಜೆಪಿಗೆ ಚಾಣಾಕ್ಯ. ಯಡಿಯೂರಪ್ಪ ರಾಜ್ಯಕ್ಕೆ ಚಾಣಾಕ್ಯ. ಅವರ ನೇತೃತ್ವದಲ್ಲೇ ಎಲ್ಲ ಉಪಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದೇವೆ. ಶಿರಾದಲ್ಲಿ ಬಿಜೆಪಿ ಗೆಲುವು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಆ ಮಾತು ಸುಳ್ಳಾಗಿಸಿದರು’ ಎಂದರು.
‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ನಮ್ಮೆಲ್ಲ ಶಾಸಕರಿಗೆ ಈ ಮುಂಚೆ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ. ಕೋವಿಡ್ ಸಂಕಷ್ಟದ ನಡುವೆಯೂ ವಿಜಯನಗರ ಕ್ಷೇತ್ರದಲ್ಲಿ ₹243.35 ಕೋಟಿ ಮೊತ್ತದ ನೀರಾವರಿ ಯೋಜನೆಗೆ ಚಾಲನೆ ಕೊಟ್ಟು ಉಪಚುನಾವಣೆಗೂ ಮುನ್ನ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ. ವಿಜಯನಗರ ಕ್ಷೇತ್ರದ ಭವಿಷ್ಯ ಬರೆಯುವ ಏಕೈಕ ವ್ಯಕ್ತಿ ಅವರು’ ಎಂದು ಬಣ್ಣಿಸಿದರು.
‘ವಿಜಯನಗರ ಜಿಲ್ಲೆ ರಚನೆ ಆಗುವುದರಿಂದ 371(ಜೆ) ಸೌಲಭ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ಸತ್ಯಕ್ಕೆ ದೂರವಾದುದು. ಅದು ವದಂತಿಯಷ್ಟೇ. ಅದಕ್ಕೆ ಜನ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.