ಹೊಸಪೇಟೆ:ಬೆಂಗಳೂರಿನ ರಾಷ್ಟ್ರೀಯ ಹಿಂದೂ ಮಹಿಳಾ ಸೇವಾ ಸಂಘ ಮತ್ತು ಹನುಮ ಮಾಲಾ ಸೇವಾ ಟ್ರಸ್ಟ್ ಸಹಭಾಗಿತ್ವದಲ್ಲಿ ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ಬುಧವಾರ ಹನ್ನೊಂದು ಮುತ್ತೈದೆಯರು ಭಾಗೀರಥಿ ಬಾಗಿನ ಸಮರ್ಪಿಸಿದರು.
ನೆರೆ, ಬರದಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಒಳ್ಳೆಯದಾಗಲಿ ಎಂಬ ಸಂಕಲ್ಪದೊಂದಿಗೆ ಪೂಜೆ ನೆರವೇರಿಸಿದ ಬಳಿಕ ತುಂಗೆಗೆ ಬಾಗಿನ ಅರ್ಪಿಸಿದರು.
ಹನುಮ ಮಾಲ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವೆಂಕೋಬರಾವ್ ಮಾತನಾಡಿ, ‘ರಾಜ್ಯದ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿ ಜನಜೀವನ ಸಹಜ ಸ್ಥಿತಿಗೆ ಬರಲಿ, ಜನರಿಗೆ ಒಳ್ಳೆಯದಾಗಲಿ ಎಂಬ ಸಂಕಲ್ಪದೊಂದಿಗೆ ಹನ್ನೊಂದು ಮುತ್ತೈದೆಯರು ಭಾಗೀರಥಿ ಬಾಗಿನ ಸಮರ್ಪಿಸಿದ್ದಾರೆ’ ಎಂದು ಹೇಳಿದರು.
’ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚುತ್ತಿವೆ. ನಾವು ದೈವದ ಮೊರೆ ಹೋಗಿದ್ದೇವೆ. ಭಗವಂತ ನಮ್ಮ ಪೂಜೆಗೆ ಸ್ಪಂದಿಸಿ ಜನರ ಬದುಕು ಉತ್ತಮಗೊಳಿಸುತ್ತಾನೆ ಎಂಬ ನಂಬಿಕೆ ಇದೆ’ ಎಂದರು.
ರಾಷ್ಟ್ರೀಯ ಹಿಂದೂ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಮೀರಾ ಅನುರಾಧ ಪಡಿಯಾರ್ ಮಾತನಾಡಿ, ‘ನದಿಗಳು ಶಾಂತವಾಗಿ ಪ್ರವಾಹ ಇಳಿಮುಖವಾಗಬೇಕೆಂದು ಪ್ರಾರ್ಥಿಸಿ ಬಾಗಿನ ಅರ್ಪಿಸಲಾಗಿದೆ. ಧಾರ್ಮಿಕ ಶ್ರದ್ಧಾ, ಭಕ್ತಿಯಿಂದ ಈ ನಾಡು ರಕ್ಷಿಸಬಹುದು’ ಎಂದು ಹೇಳಿದರು.
ಸಂಘಟನೆಯ ಶ್ಯಾಮಲಾ, ನಾಗರತ್ನ, ಅರುಣ, ಕೋಮಲ, ಈಶ್ವರಿ, ಅನಸೂಯ, ಯಶೋಧರ, ಲಕ್ಷ್ಮಿ, ಲತಾ, ವಿಜಯಮ್ಮ ಭಾಗಿನ ಸಮರ್ಪಿಸಿದರು. ಶ್ರೀನಿವಾಸ, ಮಂಜುನಾಥ, ತೇಜಸ್ವಿನಿ,ವಿ.ರಾವ್, ಬಾಲಾಜಿ, ಹರಿಶಿವಕುಮಾರ ಇದ್ದರು.