ಬಳ್ಳಾರಿ: ಅಖಿಲ ಭಾರತ ಬಂದ್ಗೆ ಜಿಲ್ಲೆಯಲ್ಲಿ ಸದ್ಯ ಮಿಶ್ರ ಪ್ರತಿಕ್ರಿಯೆ ದೊರಕಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಗಳು ನಿಲ್ದಾಣದಲ್ಲಿದ್ದರೂ ಪ್ರಯಾಣಿಕರು ಬಾರದೆ ನಿಂತಿವೆ. ಕೆಲವು ತಾಲ್ಲೂಕುಗಳಲ್ಲಿ ಕೆಲವೇ ಬಸ್ಗಳು ಸಂಚರಿಸುತ್ತಿವೆ. ಆಟೋರಿಕ್ಷಾಗಳ ಸಂಚಾರ ನಡೆದಿದೆ. ಔಷಧಿ ಅಂಗಡಿ, ಪೆಟ್ರೋಲ್ ಬಂಕ್ಗಳು ತೆರೆದಿವೆ.
ಇತರೆ ಕೆಲವು ಅಂಗಡಿಗಳು ತೆರೆದಿದ್ದು ಬಹುತೇಕ ಮುಚ್ಚಿವೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಹತ್ತಾರು ಸಂಘಟನೆಗಳು ಸಜ್ಜಾಗಿವೆ.
ಸಂಡೂರಿನಲ್ಲಿ ಬಂದ್ ಕಾರಣದಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಆಟೊ ರಿಕ್ಷಾ ಸಂಚಾರ ಎಂದಿನಂತಿದೆ. ಸದ್ಯಕ್ಕೆ ಕೆಲ ಹೋಟೆಲ್ಗಳು, ಅಂಗಡಿಗಳು ತೆರೆದಿವೆ. ಹೂ ಹಣ್ಣು, ತರಕಾರಿ, ಔಷಧಿ ಅಂಗಡಿಗಳು ತೆರೆದಿವೆ.
ಕೂಡ್ಲಿಗಿಯಲ್ಲಿ ಬೆಳಿಗ್ಗೆ ಕೆಲ ಬಸ್ಸುಗಳು ಸಂಚಾರ ಆರಂಭಿಸಿದವು. ಕೆಲ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂತು. ಅಂಗಡಿಗಳು ತೆರೆದಿವೆ.
ಹಗರಿಬೊಮ್ಮನಹಳ್ಳಿಯಲ್ಲಿ ಕೆಲವು ಅಂಗಡಿಗಳು ಮುಚ್ಚಿವೆ. ಕಂಪ್ಲಿಯಲ್ಲೂ ಅದೇ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜಗೌಡ ತಿಳಿಸಿದ್ದಾರೆ.